ಕಶೆಟ್ಟಿಹಳ್ಳಿ ಗ್ರಾಮಠಾಣಾ ಜಾಗ ಸರ್ವೇ ಮಾಡಿಸಿ, ಹದ್ದುಬಸ್ತು ಮಾಡಲು ಒತ್ತಾಯ

ಕಶೆಟ್ಟಿಹಳ್ಳಿಯಿಂದ ದಾವಣಗೆರೆಗೆ ಪಾದಯಾತ್ರೆ : ರಸ್ತೆ ತಡೆಗೆ ಮುಂದಾದ ರೈತರು, ಪಾದಯಾತ್ರೆ ತಡೆದ ಪೊಲೀಸರು

ದಾವಣಗೆರೆ, ಫೆ. 23- ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಶೆಟ್ಟಿಹಳ್ಳಿಯಲ್ಲಿ 18 ಎಕರೆ ಗ್ರಾಮಠಾಣಾ ಜಾಗವಿದ್ದು, ಸದರಿ ಜಾಗವನ್ನು ಸರ್ವೇ ಮಾಡಿಸಿ, ಹದ್ದುಬಸ್ತು ಮಾಡಿಸಿಕೊಡುವಂತೆ ಒತ್ತಾಯಿಸಿ ಕಶೆಟ್ಟಿಹಳ್ಳಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಸಲಾಗಿದ್ದ ಪಾದಯಾತ್ರೆಯನ್ನು ನಗರದ ಹೊರವಲಯದ ವಿಶ್ವಚೇತನ ವಸತಿ ಶಾಲೆ ಬಳಿ ತಡೆಯಲಾಯಿತು.

ಶಿರಮಗೊಂಡನಹಳ್ಳಿಯಿಂದ ಪಾದಯಾತ್ರೆ ವಿಶ್ವಚೇತನ ಶಾಲೆ ಹತ್ತಿರ ಬರುತ್ತಿದ್ದಂತೆ ಪಾದಯಾತ್ರಿಗಳು ರಸ್ತೆ ತಡೆ ಚಳವಳಿ ಮಾಡಲು ಮುಂದಾದಾಗ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುವ ಮುನ್ಸೂಚನೆ ಕಂಡು ಬಂದಾಗ, ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ತಡೆದರು. 

ದಾವಣಗೆರೆ ನಗರ ಪ್ರವೇಶಿಸಲು ಅವಕಾಶ ನೀಡದಿದ್ದಾಗ ಹದಡಿ ರಸ್ತೆ ವಿಶ್ವಚೇತನ ಶಾಲೆ ಬಳಿ ಧರಣಿ ಆರಂಭಿಸಿ, ಭೂಸ್ವಾಧೀನ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದರು.

  ಉಪವಿಭಾಗಾಧಿಕಾರಿ ದುರ್ಗಶ್ರೀ ಧರಣಿ ಸ್ಥಳಕ್ಕೆ ಬಂದು ಧರಣಿ ನಿರತರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ, ಲಿಖಿತ ಆದೇಶ ನೀಡಿದರೆ ಈಗಲೇ ಧರಣಿ ನಿಲ್ಲಿಸುವುದಾಗಿ ನೇತೃತ್ವ ವಹಿಸಿದ್ದ ತೇಜಸ್ವಿ ಪಟೇಲ್ ಪ್ರತಿಕ್ರಿಯಿಸಿದಾಗ ಬಂದ ದಾರಿಗೆ ಸುಂಕವಿಲ್ಲವಂತೆ ಉಪವಿಭಾಗಾ ಧಿಕಾರಿಗಳು ಮೇಲಾಧಿಕಾರಿಗಳ ಜೊತೆ ಮಾತನಾಡುವುದಾಗಿ ಹೇಳಿ ವಾಪಸ್ಸಾದರು.

ಭೂಸ್ವಾಧೀನ ಇಲಾಖೆ ಉಪನಿರ್ದೇಶಕರು ಧರಣಿ ನಿರತರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಗ್ರಾಮಠಾಣಾ ಜಾಗದ ಬಗ್ಗೆ ಇಲಾಖೆ ಆಯುಕ್ತರಿಂದ ಆದೇಶ ಪತ್ರ ಬರಬೇಕಾಗುತ್ತದೆ. ಸ್ವಲ್ಪ ಸಮಯಾವಕಾಶ ಬೇಕಾಗಿರುವುದರಿಂದ ಅವರೊಂದಿಗೆ ಪತ್ರದ ಮೂಲಕ ಮನವಿ ಮಾಡುವೆ ಎಂದು ಹೇಳಿದಾಗ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ನಾಳೆಯ ಬೆಳವಣಿಗೆ ನೋಡಿಕೊಂಡು ಪ್ರತಿಭಟನೆ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್, ಕತ್ತಲಗೆರೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಹಾರುದ್ರಯ್ಯ, ಸದಸ್ಯರಾದ ಪಾರ್ವತಿಬಾಯಿ, ಚಂದ್ರನಾಯ್ಕ, ರಾಮಸ್ವಾಮಿ, ತಿಪ್ಪಯ್ಯ, ಕೆ.ಟಿ. ಲೋಕಪ್ಪ, ಕರಿಬಸಪ್ಪ, ಬಿ. ಸುರೇಶ್, ಆರ್.ಶಿವು, ಕೆ.ಎಂ. ಮಂಜುನಾಥ, ವಿಶ್ವಾರಾಧ್ಯ, ಲೋಕೇಶ್ ನಾಯ್ಕ, ಬೇಬಿಬಾಯಿ, ಲೋಕಿಬಾಯಿ, ಜಗದೀಶ್, ಅಭಿಷೇಕ್ ಮತ್ತಿತರರು ಪಾಲ್ಗೊಂಡಿದ್ದರು.

ಕಾಳಜಿ ವಹಿಸಿದ ಅಧಿಕಾರಿಗಳು : ಕಳೆದ 8 ವರ್ಷಗಳಿಂದಲೂ ಗ್ರಾಮ ಠಾಣಾ ಗುರುತಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಂದು ಕಶೆಟ್ಟಿಹಳ್ಳಿಯಿಂದ ದಾವಣಗೆರೆಯವರೆಗೆ ಸುಮಾರು 33 ಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ಮಾಡಿಕೊಂಡು ಬಂದಿದ್ದರೂ, ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಆದರೂ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯೆ ವಹಿಸುತ್ತಿರುವುದು ಸರಿಯಲ್ಲ ಎಂದು ಗ್ರಾ.ಪಂ. ಸದಸ್ಯ ಮಹಾರುದ್ರಯ್ಯ ದೂರಿದರು.

error: Content is protected !!