ಪಂಚಾಯತಿ ಫೈಟ್ – ಸ್ಪರ್ಧಾ ಕಣದಲ್ಲಿ ಜರ್ಮಲಿ ದೊರೆ ಇಮ್ಮಡಿ ಸಿದ್ದಪ್ಪನಾಯಕ

ಪಂಚಾಯತಿ ಫೈಟ್ - ಸ್ಪರ್ಧಾ ಕಣದಲ್ಲಿ ಜರ್ಮಲಿ ದೊರೆ ಇಮ್ಮಡಿ ಸಿದ್ದಪ್ಪನಾಯಕ - Janathavaniಕೂಡ್ಲಿಗಿ, ಡಿ.21 – ಅಂದು ರಾಜಪ್ರಭುತ್ವ ದಲ್ಲಿ ಕೂಡ್ಲಿಗಿ ಸುತ್ತಮುತ್ತಲ ಪ್ರದೇಶದ 133 ಹಳ್ಳಿಗಳ ಜಹಗೀರ್‍ದಾರರಾಗಿ ಪಾಳೆಗಾರಿಕೆ ನಡೆಸಿದ ಜರ್ಮಲಿ ದೊರೆಗಳ ರಾಜವಂಶಸ್ಥ ರಲ್ಲಿ ಒಬ್ಬರಾಗಿರುವ ಈಗಿನ ಇಮ್ಮಡಿ ಸಿದ್ದಪ್ಪನಾಯಕ ದೊರೆ ಇಂದಿನ  ಪ್ರಜಾಪ್ರಭುತ್ವದ ರಾಜಕೀಯ ಅಖಾಡಕ್ಕಿಳಿದು ಜರ್ಮಲಿ ಗ್ರಾಮ ಪಂಚಾಯತಿ ಚುನಾವಣಾ ಅಂತಿಮ ಕಣದ ಅಭ್ಯರ್ಥಿಯಾಗಿದ್ದಾರೆ.

ಚುನಾವಣಾ ರಂಗು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು ಜರ್ಮಲಿಯ 4 ಸ್ಥಾನಗಳಿಗೆ 11 ಜನ ಸ್ಪರ್ಧಾ ಕಣದಲ್ಲಿದ್ದಾರೆ. ಎಸ್ಟಿ ಮೀಸ ಲಾತಿ ಸ್ಥಾನಕ್ಕೆ ಈ ಬಾರಿಯ ಜನರ ಒತ್ತಾಸೆಯ ಮೇರೆಗೆ ಕೊನೆ ಘಳಿಗೆಯಲ್ಲಿ ಜರ್ಮಲಿ ಪಾಳೆಗಾರರ ರಾಜವಂಶಸ್ಥ ಇಮ್ಮಡಿ ಸಿದ್ದಪ್ಪ ನಾಯಕ ದೊರೆ ನಾಮಪತ್ರ ಸಲ್ಲಿಸಿದರು. ಇವರ ಅವಿರೋಧ ಆಯ್ಕೆಗೂ ಮುಂದಾದ ಜನತೆ ಪ್ರತಿಸ್ಪರ್ಧಿ ಓಬಳೇಶ್ ಎಂಬ ಆಟೋ ಚಾಲಕ ಇದ್ದಿದ್ದರಿಂದ ಆತನಿಗೆ ನಾಮಪತ್ರ ವಾಪಸ್ ಪಡೆಯುವಂತೆ  ಹೇಳಲಾಗಿತ್ತಾದರೂ ಆ ಯುವಕ  ಬರುವಷ್ಟರಲ್ಲಿ ಸಮಯದ ನಿಗದಿ ಮೀರಿದ್ದರಿಂದ ನಾಮಪತ್ರ ವಾಪಸ್ ಪಡೆ ಯಲು ಸಾಧ್ಯವಾಗದಿದ್ದರಿಂದ ಅಂತಿಮ ಕಣದ ಫೈಟ್ ನಡೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತ್ತು.                                                                    

ರಾಜವಂಶಸ್ಥರಿಗೆ ಪ್ರಜಾಪ್ರಭುತ್ವದಲ್ಲೂ ಗೌರವ : ಯಾರಾದರೂ ಹೆಚ್ಚಿಗೆ ಮಾತನಾಡಿ ದರೆ ನೀನೇನು ದೊಡ್ಡ ಪಾಳೇಗಾರನೇ ಎಂದು ಮಾತನಾಡುವುದು ಇಲ್ಲಿ ರೂಢಿಯಾಗಿದೆ. ವಿಜಯನಗರ ಕಾಲದಲ್ಲಿ ಸಾಮಂತರಾಗಿದ್ದ ಜರ್ಮಲಿ ಪಾಳೇಗಾರರು 16ನೇ ಶತಮಾನ ದಲ್ಲಿ ಆಳ್ವಿಕೆ ನಡೆಸಿದ್ದು ರಾಜವೈಭವದಿಂದ ಮೆರೆದವರು. ಆದರೆ ಇಂದು ಅವರ ರಾಜವಂಶ ಸ್ಥರು ಈಗಲೂ ಜರ್ಮಲಿಯಲ್ಲಿ ಜನ ಸಾಮಾನ್ಯರಂತೆ ಜೀವನ ಮಾಡುತ್ತಿದ್ದಾರೆ. ಇಲ್ಲಿನ  ಸ್ಥಳೀಯರು ಇವರನ್ನು ಈಗಲೂ ದೊರೆಗಳು ಎಂತಲೇ ಕರೆಯುತ್ತಾರೆ. ಜೊತೆಗೆ ರಾಜರಿಗೆ ಗೌರವ ಈಗಲೂ ನೀಡುತ್ತಾರೆ. 

ನಮ್ಮ ಪೂರ್ವಜರು ಈ ಭಾಗದಲ್ಲಿ ರಾಜರಾಗಿ ಆಳ್ವಿಕೆ ನಡೆಸಿದ್ದಾರೆ. ಈಗ ರಾಜಪ್ರಭುತ್ವ ಇಲ್ಲ, ಪ್ರಜಾಪ್ರಭುತ್ವ ಇದೆ ಹೀಗಾಗಿ ಚುನಾವಣೆ ಯಲ್ಲಿ ಗೆದ್ದವರೇ ಇಲ್ಲಿ ರಾಜರು. ಈಗಾಗಿಯೇ ಸ್ಥಳೀಯ ಜನತೆಯ ಸಹಕಾರದ ಮೇಲೆ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಸ್ಥಳೀಯ ಜನರು ಮತ ಚಲಾಯಿಸಿ ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ. ರಾಜವಂಶಸ್ಥರಿಗೆ ಸ್ಥಳೀಯರು ಗೌರವ ನೀಡಲಿದ್ದಾರೆ. ಅದೇ ರೀತಿ ಆ ಗೌರವ ಉಳಿಸಿಕೊಂಡು ಹೋಗುತ್ತೇನೆ ಎಂದರು. 

ಗೆಲುವು ಪಡೆದ ನಂತರ ಜರ್ಮಲಿಯ ಐತಿಹಾಸಿಕ ಕುರುಹಾಗಿರುವ ಕೋಟೆ ಕೊತ್ತಲು, ದೇವಸ್ಥಾನಕ್ಕೆ ಬಂದ ಹೋಗುವ ಪ್ರವಾಸಿಗರಿಗೆ, ಜನತೆಗೆ ಉತ್ತಮ ದಾರಿ ಮಾಡುವ ಮೊದಲ ಧ್ಯೇಯ ನನ್ನದಾಗಿದೆ ಎನ್ನುತ್ತಾರೆ ಇಮ್ಮಡಿ ಸಿದ್ದಪ್ಪ ನಾಯಕ. 

error: Content is protected !!