ದಾವಣಗೆರೆ, ಜು.6- ಜಿಲ್ಲೆ ಯಲ್ಲಿ ಕೆಲವು ಸರ್ಕಾರಿ, ಸರ್ಕಾ ರದ ನಿಗಮ, ಮಂಡಳಿ, ಪ್ರಾಧಿ ಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಅಧಿಕಾರಿ, ನೌಕರರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರು ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ವಿತರಿಸುವ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡು ಸರ್ಕಾರ ದಿಂದ ವಿತರಿಸುವ ಪಡಿತರ ಮತ್ತು ಇನ್ನಿತರೆ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಇದು ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ವರ್ತನೆಯಾಗಿರುತ್ತದೆ. ಬಿಪಿಎಲ್ ಪಡಿತರ ಚೀಟಿ ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು, ಇದನ್ನು ಸರ್ಕಾರಿ ನೌಕರನಾಗಿ ಉಪಯೋಗಿಸಿಕೊಳ್ಳು ವುದು ಅಕ್ಷಮ್ಯ ಅಪರಾಧ. ಒಬ್ಬ ಸರ್ಕಾರಿ ಅಧಿಕಾರಿ, ನೌಕರ ಸರ್ಕಾರದಿಂದ ವೇತನ ಭತ್ಯೆಗಳನ್ನು ಪಡೆಯುತ್ತಿರುವುದರಿಂದ ಯಾವ ರೀತಿಯಲ್ಲೂ ಬಡತನ ರೇಖೆಗಿಂತ ಕೆಳಗೆ ಬರುವುದಿಲ್ಲ. ಆದ್ದರಿಂದ ಒಂದು ವೇಳೆ ಯಾವುದೇ ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಅಧಿಕಾರಿ, ನೌಕರ ಅಥವಾ ಆತನ, ಆಕೆಯ ಅವಲಂಬಿತ ಕುಟುಂಬ ಸದಸ್ಯ ಈಗಾಗಲೇ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ಇದೇ ದಿನಾಂಕ 10 ರೊಳಗಾಗಿ ಅದನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಕೂಡಲೇ ಹಿಂತಿರುಗಿಸಿ ರದ್ದುಪಡಿಸಿಕೊಳ್ಳತಕ್ಕದ್ದು.
ಒಂದು ವೇಳೆ ದಿನಾಂಕ 10ರ ನಂತರವೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಬಗ್ಗೆ ಮಾಹಿತಿ, ದೂರುಗಳು ಸ್ವೀಕೃತವಾದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಅವರಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.