ಪೊಲೀಸ್ ಠಾಣೆಯಲ್ಲಿ ಜೂಜು ಪ್ರಕರಣ : ಪಿಎಸ್‍ಐ ಅಮಾನತ್ತು

ದಾವಣಗೆರೆ, ಜೂ.11- ನಗರದ ಗ್ರಾಮಾಂತರ ಪೊಲೀಸ್ ಠಾಣೆಯ ವಿಶ್ರಾಂತಿ ಕೊಠಡಿಯಲ್ಲಿ ನಡೆದ ಪೊಲೀಸರ ಇಸ್ಪೀಟ್ ಜೂಜಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಸಬ್ ಇನ್ ಸ್ಪೆಕ್ಟರ್ ಸಂಜೀವ್ ಕುಮಾರ್ ಅವರನ್ನು ಕರ್ತವ್ಯ ಲೋಪದಡಿ ಅಮಾನತ್ತು ಮಾಡಲಾಗಿದೆ. 

ಈ ಘಟನೆ ಸಂಬಂಧ ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ರವಿ ಅವರು ಪಿಎಸ್‍ಐ ಸಂಜೀವ್‍ ಕುಮಾರ್ ಅವರನ್ನು ಅಮಾನತ್ತು ಪಡಿಸಿ ಆದೇಶಿಸಿದ್ದಾರೆ. 

ಇದೇ ದಿನಾಂಕ 8ರಂದು ಐಜಿಪಿ ಕಚೇರಿಯ ಸ್ವ್ಯಾಡ್  ಡಿವೈಎಸ್‍ಪಿ ಜೆ.ಜೆ. ತಿರುಮಲೇಶ್ ನೇತೃತ್ವದ ತಂಡ ಗ್ರಾಮಾಂತರ ಪೊಲೀಸ್ ಠಾಣೆ ಹಿಂಭಾಗದ ಕೊಠಡಿಯಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ಪೊಲೀಸರ ಮೇಲೆ ದಾಳಿ ನಡೆಸಿತ್ತು. 

ಈ ಸಂಬಂಧ ಪೊಲೀಸರಾದ ಲೋಹಿತ್, ನಾಗರಾಜ್, ಬಾಲರಾಜ್, ಮಹೇಶ್, ಮಂಜಪ್ಪ ಅವರನ್ನು ಬಂಧಿಸಿ, ಅವರಿಂದ 29 ಸಾವಿರ ಹಣ ವಶಪಡಿಸಿಕೊಂಡು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಈ ಐದು ಜನ ಪೊಲೀಸರನ್ನು ಐಜಿ ಅಮಾನತ್ತಿನಲ್ಲಿಟ್ಟು ಪ್ರಕರಣದ ಗಂಭೀರತೆ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ದಾವಣಗೆರೆ ಉಪವಿಭಾಗದ ಡಿಎಸ್‍ಪಿಗೆ ಸೂಚನೆ ನೀಡಿದ್ದಾರೆ.

error: Content is protected !!