ಹರಿಹರ, ಜೂ.8- ಎರಡೂವರೆ ತಿಂಗಳ ಬಳಿಕ ನಗರದಲ್ಲಿ ದೇವಸ್ಥಾನ, ಮಾಲ್, ಹೋಟೆಲ್ಗಳು ಎಂದಿನಂತೆ ಇಂದು ಕಾರ್ಯಾರಂಭ ಮಾಡಿದವು.
ಕೋವಿಡ್-19 ನಿಂದ ಸ್ಥಗಿತಗೊಂಡಿದ್ದ ಧಾರ್ಮಿಕ ಹಾಗೂ ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಠಿಯಾಗಿತ್ತು. ಜನರ ಓಡಾಟದಿಂದ ಆರ್ಥಿಕ ಚಟುವಟಿಕೆಗಳಿಗೆ ಮರು ಚಾಲನೆ ನೀಡಲಾಯಿತು.
ನಗರದ ಪ್ರತಿಷ್ಠಿತ ಶ್ರೀ ಹರಿಹರೇಶ್ವರ, ಶ್ರೀ ಲಕ್ಷ್ಮಿ, ಊರಮ್ಮ ದೇವಿ, ನೂರಾ ಎಂಟು ಲಿಂಗೇಶ್ವರ, ಬಸವೇಶ್ವರ, ವೆಂಕಟೇಶ್ವರ, ಗಣಪತಿ, ಆಂಜನೇಯ, ದತ್ತಾತ್ರೇಯ, ಅಂಬಾಭವಾನಿ, ವಿಠಲ ಮಂದಿರ, ವೀರಭದ್ರೇಶ್ವರ, ರಾಘವೇಂದ್ರಸ್ವಾಮಿ ಮಠ, ಬೀರಪ್ಪ ಮಠ, ರೇವಣಸಿದ್ದೇಶ್ವರ, ಮೌನೇಶ್ವರ, ಕಾಳಮ್ಮ, ಬಾದಾಮಿ ಬನಶಂಕರಿ, ಕೊಲ್ಲಾಪುರ ಮಹಾಲಕ್ಷ್ಮಿ, ಚೌಡೇಶ್ವರಿ ಅಮ್ಮ, ಜೋಡು ಬಸವೇಶ್ವರ ದೇಗುಲಗಳು ತೆರೆದು ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಅದರಂತೆ ಮಸೀದಿಗಳು, ದರ್ಗಾ, ಚರ್ಚ್ಗಳು ಕೂಡ ತೆರೆಯಲ್ಪಟ್ಟಿದ್ದವು. ಭಕ್ತರು ಸ್ಯಾನಿಟೈಜರ್ ಹಾಕಿಕೊಳ್ಳಲು, ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ತೀರ್ಥ, ಪ್ರಸಾದ ನಿಷೇಧ ಮಾಡಲಾಗಿತ್ತು. ಗಂಟೆ ಭಾರಿಸುವುದು, ಮೂರ್ತಿಗಳನ್ನು ಮುಟ್ಟಿ ನಮಸ್ಕರಿಸಲು ಅವಕಾಶ ನೀಡಲಾಗಿಲ್ಲ. ಪೂಜೆ, ಮಂಗಳಾರತಿಗೆ ಅವಕಾಶ ನೀಡಲಾಗಿತ್ತು.
ಸ್ವಚ್ಛತೆಗೆ ಆದ್ಯತೆ, ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.ಷರತ್ತುಗಳೊಂದಿಗೆ ಹೋಟೆಲ್ಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಪೌರಾಯುಕ್ತರಾದ ಎಸ್.ಲಕ್ಷ್ಮಿ ಅವರು ಸೂಚನೆ ನೀಡಿದ್ದಾರೆ.