ಜೂನ್ ತಿಂಗಳಿನ ಪಡಿತರ ಬಿಡುಗಡೆ

ದಾವಣಗೆರೆ, ಜೂ.7- ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜೂನ್ ಮಾಹೆಗೆ ಬಿಡುಗಡೆಯಾಗಿರುವ ಪಡಿತರದ ಮಾಹಿತಿ ಹೀಗಿದೆ.

ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪ್ರತಿ ಕಾರ್ಡಿಗೆ 35 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ತೊಗರಿಬೇಳೆ ವಿತರಿಸಲಾಗುವುದು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ (ಎನ್‌ಎಫ್‌ಎಸ್‌ಎ) 10 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ, 2 ಕೆ.ಜಿ. ತೊಗರಿಬೇಳೆ ವಿತರಿಸಲಾಗುವುದು.

ಒಪ್ಪಿಗೆ ನೀಡಿದ ಹಾಗೂ ಒಪ್ಪಿಗೆ ನೀಡಲಾರದ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಕೆ.ಜಿ.ಗೆ ರೂ. 15 ರಂತೆ 5 ಕೆ.ಜಿ. ಅಕ್ಕಿ ಹಾಗೂ 2 ಕ್ಕಿಂತ ಹೆಚ್ಚಿನ ಸದಸ್ಯರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು. ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಕೆಜಿಗೆ ರೂ. 15 ರಂತೆ 10 ಕೆಜಿ ಅಕ್ಕಿ ವಿತರಿಸಲಾಗುವುದು. ವಲಸೆ ಕಾರ್ಮಿಕರಿಗೆ ಹಾಗೂ ಪಡಿತರ ಚೀಟಿ ಪಡೆಯದೇ ಇರುವ ಪ್ರತಿ ಫಲಾನುಭವಿಗಳಿಗೆ ಮೇ ಮಾಹೆಯ ಪಡಿತರ ಈಗಾ ಗಲೇ ಪಡೆಯದಿದ್ದರೆ ಜೂನ್ ಮಾಹೆಗೆ ಉಚಿತವಾಗಿ 5 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ಕಡಲೆಕಾಳು ವಿತರಿಸಲಾಗುವುದು.

ಅಂತರ್‌ರಾಜ್ಯ ಹಾಗೂ ಅಂತರ್‌ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯವಾಗಿ ಬೆರಳಚ್ಚು ಮೂಲಕ ಹಾಗೂ ಬೆರಳಚ್ಚು ಬಾರದ ಕಾರ್ಡ್‌ದಾರರು ಮೊಬೈಲ್ ಓಟಿಪಿ ಮೂಲಕವೇ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಸಾಮಾಜಿಕ ಅಂತರ ದಲ್ಲಿ ನಿಂತು ಪಡಿತರ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

error: Content is protected !!