ಕೂಡ್ಲಿಗಿ, ಮಾ.11- ತಾಲ್ಲೂ ಕಿನ ಗುಡೇಕೋಟೆ ಗ್ರಾಮದಲ್ಲಿ ಶಿವನು ಪಾರ್ವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿ ರುವ ಅಪರೂಪದ ಶಿವನ ದೇವಾ ಲಯವಿದ್ದು, ಪ್ರತಿವರ್ಷ ಶಿವರಾತ್ರಿ ಯಂದು ಈ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರು ಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಶಿವರಾತ್ರಿಯಾದ ಇಂದು ಬೆಳಿಗ್ಗೆಯಿಂದ ಭಕ್ತರು ದೇವಾಲಯಕ್ಕೆ ಹಣ್ಣು, ಕಾಯಿ, ಪ್ರಸಾದ ಅರ್ಪಿಸಿ ಪೂಜೆ ಸಲ್ಲಿಸಿದರು.
ದೇವಾಲಯದ ವಿಶೇಷ: ಅಂದಾಜು 5 ಅಡಿ ಎತ್ತರದ ಶಿವಪಾರ್ವತಿ ಮೂರ್ತಿಯನ್ನು ಬಳಪದ ಕಲ್ಲಿನಿಂದ ಕೆತ್ತಲಾಗಿದ್ದು, ಮೂರ್ತಿಯನ್ನು ಹಾಗೂ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಿದ್ದು, ಕೆಲವರು ಪಾಳೇಗಾರರ ಕಾಲದ್ದಾಗಿದೆ ಎಂತಲೂ ಹೇಳುತ್ತಾರೆ. ಶಿವ ತನ್ನ ತೊಡೆಯ ಮೇಲೆ ಪಾರ್ವತಿಯನ್ನು ಕೂರಿಸಿಕೊಂಡಿರುವ ಬಳಪದ ಕಲ್ಲಿನ ಮೂರ್ತಿಯ ಜೊತೆಗೆ ಪಕ್ಕದಲ್ಲಿಯೇ ಮಹಿಷಾಷುರ ಮರ್ದಿನಿ ಮೂರ್ತಿಯನ್ನು ಸಹ ಅಷ್ಟೇ ಸೊಗಸಾಗಿ ಕೆತ್ತಲಾಗಿದೆ.
ಶಿವರಾತ್ರಿಯಂದು ಭಕ್ತಸಾಗರ: ಗುಡೇಕೋಟೆಯ ಶಿವನ ದೇವಾಲಯಕ್ಕೆ ಭಕ್ತರು ಹರಿದು ಬಂದರು. ದೂರದ ಊರುಗಳಿಂದಲೂ ಸಹ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು. ರಾತ್ರಿಯಿಡೀ ತಾಲ್ಲೂಕಿನ ಶಿವನ ದೇವಾಲಯಗಳಲ್ಲಿ ಭಕ್ತರು ಜಾಗರಣೆ ಮಾಡುವುದರ ಮೂಲಕ ಹಬ್ಬಕ್ಕೆ ಕಳೆ ತುಂಬಿದರು.