ಕುರುಬ ನಿಗಮ ಬೇಕು, ಮೀಸಲಾತಿಗೆ ಸಮಿತಿ ಬೇಡ

ಮುಖ್ಯಮಂತ್ರಿಗೆ ಹಾಲುಮತ ಸಭಾ ಆಗ್ರಹ

ದಾವಣಗೆರೆ, ಮಾ. 12 – ಕುರುಬರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ಇಟ್ಟಿದ್ದರೂ ಸಹ, ಆ ಬಗ್ಗೆ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಹಾಲುಮತ ಮಹಾಸಭಾ ಆಕ್ಷೇಪಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮಹಾ ಸಭಾ, ಮುಂದುವರೆದ ಜಾತಿಗಳಿಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಆದರೆ, ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಕುರುಬ ಸಮಾಜಕ್ಕೆ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ತಿಳಿಸಿದೆ.

ಕುರುಬರನ್ನು ಎಸ್.ಟಿ.ಗೆ ಸೇರ್ಪಡೆ ಮಾಡಲು ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗುತ್ತಿದೆ. ಇಷ್ಟಾದರೂ, ಇತರೆ ಸಮಾಜಗಳ ಮೀಸಲಾತಿ ಬೇಡಿಕೆಗಳಿಗೆ ರೂಪಿಸಲಾಗಿರುವ ತ್ರಿಸದಸ್ಯ ಸಮಿತಿಗೆ ಕುರುಬರ ಮೀಸಲಾತಿ ಸೇರ್ಪಡೆ ಮಾಡಿರುವುದನ್ನು ಮಹಾಸಭಾ ವಿರೋಧಿಸಿದೆ.

ಸರ್ಕಾರದ ಕ್ರಮದಿಂದ ಮೀಸಲಾತಿ ಬೇಡಿಕೆ ಈಡೇರಿಸುವುದು ವಿಳಂಬವಾಗುತ್ತದೆ. ಕುರುಬರು ಹೊಸದಾಗಿ ಮೀಸಲಾತಿ ಬೇಡಿಕೆ ಇಟ್ಟಿಲ್ಲ. ಈಗಾ ಗಲೇ ಕುರುಬ ಸಮುದಾಯದ ಸಮಾನಾರ್ಥ ಪದದ ಜಾತಿಗಳು ಮೀಸಲಾತಿಯಲ್ಲಿವೆ. ಅದನ್ನೇ ರಾಜ್ಯಾದ್ಯಂತ ವಿಸ್ತರಿಸಲು ಕೋರಿದ್ದೇವೆ ಎಂದು ಮಹಾಸಭಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ಮಹಾಸಭಾದಿಂದ ರಾಜ್ಯ ಸಂಚಾಲಕ ವೆಂಕಟೇಶ್ ಮಾಯಕೊಂಡ, ದಾವಣಗೆರೆ ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಪ್ರಧಾನ ಕಾರ್ಯದರ್ಶಿ ಘನರಾಜ್, ಕಾರ್ಯದರ್ಶಿ ಸಿದ್ದಲಿಂಗಪ್ಪ ಪತ್ರ ಬರೆದಿದ್ದಾರೆ.

error: Content is protected !!