ಅಡಿಕೆ ಹರಳು ಉದುರುವ, ಹಿಂಗಾರ ಒಣಗುವ, ಹಿಂಗಾರ ತಿನ್ನುವ ಸಮಸ್ಯೆ

ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು

ದಾವಣಗೆರೆ, ಮಾ. 4-ಅಡಿಕೆಯಲ್ಲಿ ಹಿಂಗಾರ (ಹೊಂಬಾಳೆ) ತಿನ್ನುವ ಹುಳುಗಳು, ಹರಳು ಉದು ರುವುದು, ಹಿಂಗಾರು ಕೊಳೆ ರೋಗ ಕಾಣಿಸಿಕೊಂಡಿದ್ದು ಅದನ್ನು ತಡೆಗಟ್ಟಲು ರೈತರು ಅಗತ್ಯ ಸಂರಕ್ಷಣಾ ಕ್ರಮ ಗಳನ್ನು ಕೈಗೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ  ಗಿರಿನಾಯ್ಕ್ ಸಲಹೆ ನೀಡಿದ್ದಾರೆ.

ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಹರಳು ಉದುರುವುದು ಮತ್ತು ಹಿಂಗಾರ ಕೊಳೆ ರೋಗ. ಅಡಿಕೆಯಲ್ಲಿ ಹಿಂಗಾರ ಬಿಚ್ಚಿ ಕಾಳು ಕಟ್ಟುವ ಮೊದಲೇ ಕೀಟಗಳು ಆಕ್ರಮಿಸಿಕೊಳ್ಳು ವುದರಿಂದ ಹಿಂಗಾರ ಸಂಪೂರ್ಣವಾಗಿ ನಾಶವಾಗುತ್ತಿದೆ. ಹಿಂಗಾರಿಗೆ ಕೊಲೆ ಟ್ರೊಟ್ರೈಕಮ್ಗ್ಲೀಯೋಸ್ಪೊರಿಯ್ಡಿಸ್ ಎಂಬ ಶಿಲೀಂಧ್ರದ ಸೋಂಕಿಗೆ ಒಳಗಾದಾಗ ಹಿಂಗಾರ ಒಣಗುವ ಮತ್ತು ಅನುಚಿತ ನೀರಿನ ನಿರ್ವಹಣೆ ಹಾಗೂ ಲಘು ಪೋಷಕಾಂಶಗಳ ಕೊರತೆಯಿಂದ ಹರಳು ಉದುರುವ ಸಮಸ್ಯೆ ಕಂಡು ಬರುತ್ತಿದೆ.

ಉತ್ತಮ ಗಿಡಗಳ ಸಂರಕ್ಷಣೆಗಾಗಿ ರೋಗ ಪೀಡಿತ ಒಣಗಿದ ಹಿಂಗಾರನ್ನು ತೋಟದಿಂದ ತೆಗೆದು ನಾಶಪಡಿಸಬೇಕು ಅಥವಾ ಕಿತ್ತು ಸುಡಬೇಕು ಮತ್ತು ಹೊಸದಾಗಿ ಬಂದ ಹಿಂಗಾರಿನಲ್ಲಿ ಈ ಸಮಸ್ಯೆ ಕಂಡು ಬಂದಲ್ಲಿ ಕಾರ್ಬನ್‌ಡೈಜಿಮ್ + ಮ್ಯಾಂಕೊಜೆಬ್ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಇದರ ಜೊತೆಗೆ ರಸ ಹೀರುವ ಕೀಟಗಳ (ಶಲ್ಕಗಳು ಮತ್ತು ಅಫಿಡ್) ನಿಯಂತ್ರಣಕ್ಕೆ ಅಂತರ್‌ವ್ಯಾಪ್ತಿ ಕೀಟನಾಶಕ ಪ್ಯೂಪ್ರನಿಲ್ 1 ರಿಂದ 1.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಇಮಿಡಾಕ್ಲೋಪ್ರಿಡ್+ ಅಸಿಫೇಟ್ ಮಿಶ್ರಣದ ಕೀಟನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಅಡಿಕೆಯಲ್ಲಿ ಪ್ರಮುಖವಾಗಿ ಹರಳು ಉದುರುವ ಸಮಸ್ಯೆ ಕಂಡು ಬರುತ್ತಿದ್ದು ಇದರ ನಿರ್ವಹಣೆಗೆ ಕೀಟ ನಾಶಕಗಳನ್ನು ಸಿಂಪಡಿಸುವ ಸಂದರ್ಭದಲ್ಲಿ ಲಘು ಪೋಷಕಾಂಶಗಳ ಮಿಶ್ರಣವನ್ನು 5 ಮಿ.ಲೀ. ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಮತ್ತು ಉತ್ತಮ ನೀರಿನ ನಿರ್ವಹಣೆಯಿಂದ ಹರಳು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಮತ್ತು ಮಣ್ಣು, ನೀರು ಪರೀಕ್ಷೆ ಮಾಡಿಸುವುದರಿಂದ ರೋಗ ಬಾಧೆಗಳನ್ನು ತಡೆಗಟ್ಟಬಹುದು.

ಹೆಚ್ಚಿನ ಮಾಹಿತಿಗಾಗಿ ಆಯಾ ಹೋಬಳಿಯ ತೋಟಗಾರಿಕೆ ಅಧಿಕಾರಿಗಳು ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

error: Content is protected !!