ಅನಧಿಕೃತ ಧಾರ್ಮಿಕ ಕಟ್ಟಡ ತೆರವಿಗೆ ಪ್ರತಿರೋಧ ಬೇಡ

ದಾವಣಗೆರೆ, ಏ. 24 – ಸಾರ್ವಜನಿಕ ಸ್ಥಳ, ರಸ್ತೆ, ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದ ಬಗ್ಗೆ ಆರು ವಾರದೊಳಗಾಗಿ ವರದಿಯನ್ನು ಸರ್ಕಾರದ ಮೂಲಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದು, ಸಾರ್ವಜನಿಕರು ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಪ್ರತಿರೋಧ ವ್ಯಕ್ತಪಡಿಸಬಾರದಾಗಿ ಹಾಗೂ ಪ್ರತಿರೋಧ ವ್ಯಕ್ತಪಡಿಸುವ ವ್ಯಕ್ತಿಗಳಿಗೆ ಸಹಕಾರ ನೀಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸರ್ಕಾರದ ಆದೇಶದನ್ವಯ ಸಾರ್ವಜನಿಕ ಸ್ಥಳಗಳಲ್ಲಿ 2009 ರ ಸೆ. 29 ಕ್ಕೂ ಮುಂಚಿತವಾಗಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಆ ಪ್ರದೇಶದ ಪ್ರಶಾಂತತೆಗೆ ಭಂಗವುಂಟು ಮಾಡುವುದಿಲ್ಲವೆಂದು ಖಚಿತ ಪಟ್ಟಲ್ಲಿ, ಅಂತಹ ಕಟ್ಟಡಗಳನ್ನು ಕೆಟಿಸಿಪಿ ಕಾಯ್ದೆ, ಮುನಿಸಿಪಾಲಿಟಿ ಕಾಯ್ದೆ, ಪುರಸಭೆ ಕಾಯ್ದೆ ಮತ್ತು ಇತರೆ ಸ್ಥಳೀಯ ಕಾನೂನು ಕಾಯ್ದೆಗಳಿಗೆ ವ್ಯತಿರಿಕ್ತವಾಗಿಲ್ಲದಿದ್ದಲ್ಲಿ, ಅವುಗಳನ್ನು ಉಳಿಸಿಕೊಂಡು ಕಾನೂನು ಕಾಯ್ದೆ ಗೊಳಪಟ್ಟಂತೆ ಅಧಿಕೃತಗೊಳಿಸ ಬಹುದಾಗಿರುತ್ತದೆ. 

ಸಾರ್ವಜನಿಕ ರಸ್ತೆಗಳಲ್ಲಿ, ಸಾರ್ವಜನಿಕ ಉದ್ಯಾನವನಗಳಲ್ಲಿ ಹಾಗೂ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವುದು ಮತ್ತು ನಿರ್ಮಾಣ ಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಈ ಕುರಿತು ಜಿಲ್ಲಾಧಿಕಾರಿಗಳಿಗೆ, ತಾಲ್ಲೂಕು ತಹಶೀಲ್ದಾರರುಗಳಿಗೆ ಮತ್ತು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿಯನ್ನು ಒದಗಿಸಬಹುದು. ಹಾಗೂ ಮಾಹಿತಿಯನ್ನು ಒದಗಿಸುವ ಸಾರ್ವಜನಿಕರ ಹೆಸರನ್ನು ಬಹಿರಂಗ ಪಡಿಸದೇ ರಹಸ್ಯವಾಗಿಡಲಾಗುವುದು. 

ಕಟ್ಟಡಗಳ ತೆರವು ಕಾರ್ಯಾಚರಣೆಗೆ ಯಾರಾದರೂ ಅಡ್ಡಿಪಡಿಸಲು ಅಥವಾ ತಡೆಯೊಡ್ಡಲು ಮುಂದಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಲಾಗುವುದು ಎಂದವರು ಹೇಳಿದ್ದಾರೆ.

error: Content is protected !!