ಡ್ರಗ್ಸ್‌ನಿಂದ `ಅಡಿಕೆ’ ಬಿಡಲು ಕ್ರಮ

ವೆಬ್‌ಸೈಟ್‌ನಲ್ಲಿ ತಪ್ಪಾಗಿ ಅಡಿಕೆ ಡ್ರಗ್ಸ್ ಎಂದು ಪ್ರಕಟಣೆ : ಸಚಿವ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು, ಜ.29 – ಡ್ರಗ್ಸ್ ಪಟ್ಟಿಯಿಂದ ಅಡಿಕೆಯನ್ನು ಕೈಬಿಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.

ಶೂನ್ಯವೇಳೆಯಲ್ಲಿ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಯು.ಟಿ. ಖಾದರ್, ಎಂ.ಪಿ. ಕುಮಾರಸ್ವಾಮಿ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ವೆಬ್‍ಸೈಟ್‍ನಲ್ಲಿ ತಪ್ಪಾಗಿ ಮುದ್ರಣವಾಗಿದೆ, ಅದನ್ನು ಸರಿಪಡಿಸಲಾಗುವುದು ಎಂದರು.  ರೈತರ ಬದುಕು ಕಟ್ಟುವ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸುವುದಿಲ್ಲ, ಕೆಳಹಂತದ ಅಧಿಕಾರಿಗಳ ಪ್ರಮಾದದಿಂದ ಈ ಸೇರ್ಪಡೆಯಾಗಿತ್ತು, ಇದನ್ನು ಸರಿಪಡಿಸಲಾಗುವುದು ಎಂದರು. 

ಇದಕ್ಕೂ ಮುನ್ನ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿರುವುದಕ್ಕೆ ಸದಸ್ಯರಿಂದ ಪಕ್ಷಾತೀತವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. 

ಸದಸ್ಯ ಹರತಾಳು ಹಾಲಪ್ಪ ವಿಷಯ ಪ್ರಸ್ತಾಪಿಸಿ, ಮಾದಕ ವಸ್ತು ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರ್ಪಡೆ ಮಾಡಿರುವುದು ವರದಿಯಾಗಿದೆ, ಸರ್ಕಾರ ಇದನ್ನು ಸೇರಿಸಿದೆಯೇ ಇಲ್ಲವೇ ಅಧಿಕಾರಿಗಳು ಸೇರಿಸಿದ್ದಾರೆಯೇ, ಸುಗ್ಗಿ ಕಾಲದಲ್ಲಿ ಈ ರೀತಿ ಮಾಡುವುದರಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದರು. 

ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, 2 ಸಾವಿರ ರೂ.ನಷ್ಟು ಅಡಿಕೆ ಬೆಲೆ ಕುಸಿದಿದೆ, ಡ್ರಗ್ಸ್ ಪಟ್ಟಿಗೆ ಸೇರ್ಪಡೆ ಮಾಡಿದವರು ಯಾರು ಎಂಬ ಬಗ್ಗೆ ತನಿಖೆ ಆಗಬೇಕು, ಕೂಡಲೇ ಡ್ರಗ್ಸ್ ಪಟ್ಟಿಯಿಂದ ಅಡಿಕೆಯನ್ನು ಕೈಬಿಡಿ ಎಂದು ಆಗ್ರಹಿಸಿದರು. ಯು.ಟಿ.ಖಾದರ್, ಎಂ.ಪಿ.ಕುಮಾರಸ್ವಾಮಿ ಇದಕ್ಕೆ ಧ್ವನಿಗೂಡಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ್ ಬೊಮ್ಮಾಯಿ, ವೆಬ್‍ಸೈಟ್‍ನಲ್ಲಿ ತಪ್ಪಾಗಿ ಮುದ್ರಣವಾಗಿದೆ. ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

error: Content is protected !!