ದಾವಣಗೆರೆ, ಜ.20 – ನಗರದ ಜೀವನಾಡಿ ಕುಂದು ವಾಡ ಕೆರೆಯ ಅವೈಜ್ಞಾನಿಕ ಕಾಮಗಾರಿಗೆ ಸ್ಮಾರ್ಟ್ ಸಿಟಿಯಿಂದ ಚಾಲನೆ ನೀಡಲಾಗಿದೆ.ಇದರಿಂದ ಕುಂದುವಾಡ ಕೆರೆ ಬರಿದಾಗಿದೆ. ಇದರಿಂದ ಅಂತರ್ಜಲ ಕಡಿಮೆಯಾಗಿ ಬೋರ್ ಗಳಲ್ಲಿ ನೀರು ಇಲ್ಲದೇ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ನೀರಿನ ಅಭಾವ ಸೃಷ್ಟಿಯಾಗುವ ಮೊದಲೇ ಎಚ್ಚೆತ್ತುಕೊಳ್ಳಿ, ಅಭಿವೃದ್ಧಿ ಹೆಸರಿನಲ್ಲಿ ಕುಂದುವಾಡ ಕೆರೆ ಬರಿದಾಗಿದೆ. ಬಿಸಿಲು ಕಾಲ ಪ್ರಾರಂಭವಾಗುವಷ್ಟರಲ್ಲಿ ನಗರದ ಜನತೆಯ ಕುಡಿಯುವ ನೀರಿನ ಬವಣೆ ಹೆಚ್ಚಾಗುವುದು ಖಚಿತ ಎಂದರು. ಕಾಮಗಾರಿ ಪ್ರಾರಂಭವಾದರೆ ವರ್ಷವಡೀ ಕೆರೆಯಲ್ಲಿ ನೀರಿಲ್ಲದ ಹಾಗೆ ಆಗುತ್ತದೆ. ಆದ ಕಾರಣ ತಿಂಗಳು ಕಳೆಯುವಷ್ಟರಲ್ಲಿ ಅಂತರ್ಜಲ ಕಡಿಮೆಯಾಗಿ ಬೋರುಗಳು ಬರಿದಾಗುತ್ತವೆ. ಜೀವಜಲಕ್ಕೆ ಕುತ್ತು, ಜೀವಜಲದ ಮಾರಣ ಹೋಮ, ಕೆರೆ ಪರಿಸರದ ನಿರ್ನಾಮ, ಕೊರೊನಾದಿಂದ ಶುದ್ಧ ಗಾಳಿ ತೆಗೆದುಕೊಳ್ಳಲಾಗದ ಜನತೆ ನೀರಿಲ್ಲದೆ ಪರಿತಪಿಸುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಮಾಜಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅಧಿಕಾರವಧಿಯಲ್ಲಿ ಕೆರೆ ನಿರ್ಮಾಣಕ್ಕೆ 3 ಕೋಟಿ ವೆಚ್ಚವೂ ತಗಲಿಲ್ಲ. ಆದರೆ, ಕೆರೆಯ ದುರಸ್ತಿಗೆ 15 ಕೋಟಿ ರೂ. ಬಿಡುಗಡೆ ಅನುದಾನ ನೀಡಿರುವುದು ಇಂತಹ ಕೊರೊನಾ ಸಂಕಷ್ಟದಲ್ಲೂ ದುಡ್ಡು ಹೊಡೆಯುವ ಬಿಜೆಪಿಯ ಭ್ರಷ್ಟಾಚಾರವನ್ನು ಖಂಡಿಸಿದ್ದಾರೆ.