ದಾವಣಗೆರೆ, ಜ.11- ಇಲ್ಲಿನ ವಿನೋಬನಗರ ಮೂರನೇ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು ಇಲ್ಲದ ಪರಿಣಾಮ ಪೋಷಕರೇ ಕೊಡಪಾನದ ಮೂಲಕ ಶಾಲೆಗೆ ನೀರು ಹೊತ್ತು ತಂದು ಕೊಡುತ್ತಿದ್ದಾರೆ.
ಹಲವು ದಿನಗಳಿಂದ ಶಾಲೆಯಲ್ಲಿ ನೀರಿನ ತೊಂದರೆಯಾಗಿದ್ದು, ಮಹಾನಗರ ಪಾಲಿಕೆ ವತಿಯಿಂದ ಯಾವುದೇ ನೀರಿನ ಸಂಪರ್ಕವಿಲ್ಲ. ಈ ಬಗ್ಗೆ ನಗರಾಭಿವೃದ್ಧಿ ಸಚಿವರಿಗೂ, ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಇದೀಗ ಶಾಲೆಯಲ್ಲಿ ಮಕ್ಕಳಿಗಾಗಿ ಅಡುಗೆ ಮಾಡಲು ಹಾಗೂ ಕುಡಿಯುವ ನೀರಿಗಾಗಿ ಎಸ್.ಡಿ.ಎಂ.ಸಿ. ಸಮಿತಿಯವರು ಹಾಗೂ ಪೋಷಕರೇ ನಿತ್ಯ ಬೇರೆ ಕಡೆಯಿಂದ ನೀರು ಹೊತ್ತು ತಂದು ಸಹಕರಿಸುತ್ತಿದ್ದಾರೆ. ಮಂದಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಲಿ. ಸರ್ಕಾರಿ ಶಾಲೆ ಎಂದು ಉದಾಸೀನ ಮಾಡುವುದು ಬೇಡ ಎಂದು ಪೋಷಕರು ಒತ್ತಾಯಿಸಿದ್ದಾರೆ.