ವಿನಯ ನಡಿಗೆ, ಹಳ್ಳಿಯ ಕಡೆಗೆ

ವಿನಯ ನಡಿಗೆ, ಹಳ್ಳಿಯ ಕಡೆಗೆ - Janathavaniಹರಿಹರ, ಡಿ. 29 – ಜಿಲ್ಲೆಯ ಜನರ ಕಷ್ಟ ಗಳನ್ನು ಅರಿತುಕೊಳ್ಳುವ ದೃಷ್ಟಿಯಿಂದ ವಿನಯ ಮಾರ್ಗ ಟ್ರಸ್ಟ್‌ನ ಅಡಿಯಲ್ಲಿ `ವಿನಯ ನಡಿಗೆ ಹಳ್ಳಿಯ ಕಡೆಗೆ’ ಎಂದು  ಜಿಲ್ಲೆಯಾದ್ಯಂತ ಪಾದ ಯಾತ್ರೆ ಮಾಡುತ್ತಿರುವುದಾಗಿ ಇನ್‌ಸೈಟ್ಸ್‌ ಸಂಸ್ಥಾ ಪಕ ಜಿ.ಬಿ. ವಿನಯಕುಮಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಜಗಳೂರು ಮತ್ತು ಹರಪನಹಳ್ಳಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಪಾದಯಾತ್ರೆ ಮಾಡುತ್ತಾ ಬಂದಿದ್ದು, ಜನರು ಕೂಡ ನಾನು ಸಂಚರಿಸಿದ ಕಡೆಗಳಲ್ಲಿ ತಮಗೆ ಆಗುತ್ತಿರುವ ಸಮಸ್ಯೆಗಳನ್ನು ಮತ್ತು ಮುಂದಿನ ದಿನಗಳಲ್ಲಿ ಅವುಗಳಿಗೆ ಹೇಗೆ ಪರಿಹಾರ ಕೊಡಬೇಕು ಎಂಬುದನ್ನು ಹೇಳುವ ಮೂಲಕ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದರಿಂದ ನನಗೆ ಇನ್ನಷ್ಟು ಆತ್ಮ ಸ್ಥೈರ್ಯ ಇಮ್ಮಡಿಯಾಗಿದೆ. ಜೊತೆಗೆ ತಳಮಟ್ಟದ ಜನರ ಕಷ್ಟಗಳು ಏನು ಎಂಬುದನ್ನು ತಿಳಿಯಲು ಸಹಕಾರಿಯಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ರಾಜಕೀಯ ವ್ಯಕ್ತಿಗಳು ಚುನಾ ವಣಾ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿ, ಮತವನ್ನು ಪಡೆಯುತ್ತಾರೆ. ತದನಂತರ ನಗರ ಪ್ರದೇಶದ ಅಭಿವೃದ್ಧಿ ಬಗ್ಗೆ ಹೆಚ್ಚು ಚಿಂತನೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಹಾಗಾಗಿ ನಾನು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳ ಬಗ್ಗೆ ಹೆಚ್ಚಿನ ಒಲವನ್ನು ತೋರಬೇಕು ಎನ್ನುವ ದೃಷ್ಟಿಯಿಂದ `ಸ್ಮಾರ್ಟ್ ವಿಲೇಜ್’  ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು, ಬಯಲು ಮುಕ್ತ ಶೌಚಾಲಯ, ಶುದ್ಧ ನೀರಿನ ಸರಬರಾಜು, ನಿರುದ್ಯೋಗಿ ಯುವ ಕರಿಗೆ ಉದ್ಯೋಗಗಳು, ಯುವಕರು ಪದವಿ ಯನ್ನು ಪಡೆದಿದ್ದರೂ ಸಹಿತ ಅವರಿಗೆ ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗದಿಂದ ವಂಚಿತರಾಗಿರುತ್ತಾರೆ. ಅವರಿಗೆ ಉದ್ಯೋಗದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ ಬೇಕಾಗುವ ಶಕ್ತಿಯನ್ನು ತುಂಬುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನನಗೆ ಎಂ.ಪಿ. ಟಿಕೆಟ್ ದೊರೆತರೆ,  ಅವುಗಳನ್ನು ಈಡೇರಿಸುವ ದೃಷ್ಟಿಯಿಂದ ಏನೆಲ್ಲಾ ಮಾಡಬಹುದೋ ಅದನ್ನು ಮಾಡುವ ಭರವಸೆಯನ್ನು ಹೊಂದಿರುವುದಾಗಿ ಹೇಳಿದರು. 

ಹರಿಹರ ತಾಲ್ಲೂಕಿನಲ್ಲಿ ಪಾದಯಾತ್ರೆ ಸಂಚಾರವನ್ನು ಇಂದು ಆರಂಭಿಸಿದ್ದು, ನಾಳೆ ದಿನಾಂಕ 30 ರಂದು ನಂದಿಗಾವಿ, ಧೂಳೆಹೊಳೆ, ಇಂಗಳಗೊಂದಿ, ಹುಲುಗಿನಹೊಳೆ, ಹೊಳೆಸಿರಿಗೆರೆ ಕಡರನಾಯ್ಕನಹಳ್ಳಿ, ವಾಸನ ನಂದಿಗುಡಿ, ದಿನಾಂಕ 31 ರಂದು ಹಿಂಡಸಘಟ್ಟ, ಕೊಕ್ಕನೂರು, ಹಳ್ಳಿಹಾಳ್, ಬೇವಿನಹಳ್ಳಿ, ಜಿಗಳಿ, ಕುಂಬಳೂರು, ಮಲೆಬೆನ್ನೂರು, ಕುಮಾರನಹಳ್ಳಿ, ಹಿರೇ ಹಾಲಿವಾಣ, ಯರೇಬನಹಳ್ಳಿ, ಯಕ್ಕನಹಳ್ಳಿ ಗ್ರಾಮ ದಲ್ಲಿ ವಾಸ್ತವ್ಯ ಮಾಡಲಿದ್ದೇವೆ ಎಂದು ಹೇಳಿದರು.  

 ಈ ಸಂದರ್ಭದಲ್ಲಿ ಪ್ರಕಾಶ್, ಭಾಗ್ಯಮ್ಮ, ಶರತ್‌ಕುಮಾರ್‌ ಶ್ರೀಕಾಂತ್ ಇತರರು ಹಾಜರಿದ್ದರು. 

error: Content is protected !!