ಸರ್ವೇ ಇಲಾಖೆ ಬಾಕಿ ಕಡತಗಳ ವಿಲೇವಾರಿಗೆ ಆದ್ಯತೆ : ಹರಿಹರ ತಹಶೀಲ್ದಾರ್

ಹರಿಹರ, ಆ. 1 – ನಗರದ ಸರ್ವೇ ಇಲಾಖೆಯಲ್ಲಿ ಬಹಳ ದಿನಗಳಿಂದ ಹಾಗೆ ಉಳಿದಿರುವ 1400 ಕ್ಕೂ ಹೆಚ್ಚು ಕಡತಗಳ ಸಮಸ್ಯೆಯನ್ನು ಪರಿಹರಿಸಲು ಮೊದಲು ಆದ್ಯತೆ ನೀಡಲಾಗುವುದು ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದರು. 

ಕಚೇರಿಯ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಯ ಸ್ಥಳದಲ್ಲಿ ಇದ್ದು ಸಾರ್ವಜನಿಕರ ಕುಂದು ಕೊರತೆಗಳನ್ನು ನೀಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಸಾರ್ವಜನಿಕರನ್ನು ವಿನಾ ಕಾರಣ ಅಲೆದಾಡಿಸದೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಇಲಾಖಾವಾರು ಅನುಷ್ಠಾನದ ಕಾರ್ಯವೈಖರಿ ತಿಳಿಯಲು ಶೀಘ್ರದಲ್ಲಿ ಸಭೆ ಏರ್ಪಡಿಸಿ, ಅವುಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುವುದಾಗಿ ಹೇಳಿದರು.

error: Content is protected !!