ದಾವಣಗೆರೆ, ಆ.1- ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಕಳೆದ 25 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಬಸ್ ಬಂದಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸ್ಮಾರ್ಟ್ ಸಿಟಿ ದಾವಣಗೆರೆ ವ್ಯಾಪ್ತಿಯಲ್ಲಿ ಬರುವ ಕೋಡಿಹಳ್ಳಿ ಗ್ರಾಮ, ಅಭಿವೃದ್ಧಿ ಕಾರ್ಯಗಳಿಂದ ಹಿಂದುಳಿದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಕಾಲಿಡುವ ವಿದ್ಯಾರ್ಥಿಗಳ ಓದು ಕುಂಠಿತಗೊಳ್ಳುತ್ತಿದೆ. ಗ್ರಾಮಸ್ಥರು ನಿತ್ಯವೂ ಸಂಚಾರದ ಕೊರತೆ ಎದುರಿಸುತ್ತಿದ್ದು, ಸರ್ಕಾರಿ ಬಸ್ ಸೌಲಭ್ಯ ಇಲ್ಲದ ಕಾರಣಕ್ಕೆ ಎಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ವಿರಾಮ ಇಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಾವು ಕಾಲ್ನಡಿಗೆಯಲ್ಲಿ ನಮ್ಮ ಶಕ್ತಿ ಹಾಕುತ್ತಿದ್ದೇವೆ. ನಮ್ಮ ಊರಿನ ರೋಗಿಗಳು ನಗರಕ್ಕೆ ಬರಲು ನರಕ ಅನುಭವಿಸುತ್ತಿದ್ದಾರೆ ಮತ್ತು ಪ್ರತಿದಿನ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವೃದ್ಧರು, ಮಹಿಳೆಯರು ನಗರಕ್ಕೆ ಹೋಗಬೇಕೆಂದರೆ ರಸ್ತೆಯಲ್ಲಿ ಚಲಿಸುವ ಲಾರಿ, ಬೈಕ್, ಟ್ರ್ಯಾಕ್ಟರ್ಗಳ ಸಹಾಯದಿಂದ ಭಯದ ವಾತಾವರಣದಲ್ಲಿ ಹೋಗಬೇಕಾಗಿದೆ.
– ಲಲಿತಮ್ಮ, ಗ್ರಾಮಸ್ಥೆ
ಮುಂದಿನ ಉತ್ತಮ ಪ್ರಜೆಗಳಾಗಳು ನಮಗೆ ಶಿಕ್ಷಣ ಬೇಕು. ಆದರೆ ನಗರದ ಕಾಲೇಜಿಗೆ ಹೋಗಲು ಬಸ್ ಸೌಲಭ್ಯ ಇಲ್ಲ. ನಮ್ಮೂರಿನ ಎಷ್ಟೋ ಪ್ರತಿಭೆಗಳು ಅಭಿವೃದ್ಧಿ ಕುಸಿತದಿಂದ ಹಿಂದುಳಿದಿವೆ.
– ವಿದ್ಯಾ ಎನ್.ಎಂ. ಗ್ರಾಮದ ವಿದ್ಯಾರ್ಥಿನಿ
ಗ್ರಾಮದ ಅಭಿವೃದ್ಧಿಯ ಮಟ್ಟ 2 ದಶಕಕ್ಕೂ ಅಧಿಕ ಕಾಲದಿಂದ ಕುಸಿದಿದೆ ಎಂದು ಗ್ರಾಮಸ್ಥರು ಹೇಳಿದರು. ಸಂಬಂಧಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಗ್ರಾಮಸ್ಥರ ಕೆಂಗಣ್ಣಿಗೆ ಬಲಿಯಾಗದೆ, ಗ್ರಾಮಕ್ಕೆ ಎರಡು ಬಸ್ ಬಿಡಬೇಕೆಂದು ಆಗ್ರಹಿಸಿದರು.