ದಾವಣಗೆರೆ, ಜು. 30- ಮಳೆಗಾಗಿ ಪ್ರಾರ್ಥಿಸಿ ಐದು ವಾರಗಳ ಕಾಲ ಸಂತೆ ನಡೆಸಲು ಸಹಕರಿಸಿದ ಮಹಾನಗರ ಪಾಲಿಕೆ ಮೇಯರ್, ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಇಲಾಖೆ, ಮುದ್ರಣ, ದೃಶ್ಯ ಮಾಧ್ಯಮ ದವರು, ವರ್ತಕರು, ಸಾರ್ವಜನಿಕರಿಗೆ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ರಾಜ್ಯದಲ್ಲಿ ಮಳೆ ಬಾರದೆ ದನಕರುಗಳು, ಪಶುಪಕ್ಷಿಗಳು, ಪ್ರಾಣಿಗಳು, ರೈತರು, ವ್ಯಾಪಾ ರಸ್ಥರು, ಸಾರ್ವಜನಿಕರು ಕಂಗಾಲಾಗಿ ಬರಗಾಲ ಪರಿಸ್ಥಿತಿ ಉಂಟಾದಾಗ ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿಗೆ ಪ್ರಾರ್ಥಿಸಿ, ದೇವಸ್ಥಾನದ ಸುತ್ತಮುತ್ತಲು ಐದು ವಾರಗಳ ಕಾಲ ಸಂತೆಯನ್ನು ಹಾಕಿದರೆ ಮಳೆ ಬರುತ್ತದೆ ಎಂಬ ನಂಬಿಕೆ, ವಿಶ್ವಾಸವಿದ್ದು, ಅದರಂತೆ ಸಂತೆ ನಡೆಸಿದ್ದರಿಂದ ಧಾರಾಕಾರವಾಗಿ ಮಳೆ ಬಂದಿರುವುದು ಸತ್ಯಸಂಗತಿ ಎಂದಿದ್ದಾರೆ.
ಈ ಬಾರಿ ಮುಂಗಾರು ಮಳೆ ಬಾರದೆ ಕಂಗಾಲಾಗಿದ್ದರಿಂದ ಇದೇ ದಿನಾಂಕ 7 ರಿಂದ 30 ರವರೆಗೆ ಐದು ವಾರಗಳ ಕಾಲ ಸಂತೆ ಹಾಕಿದ್ದರಿಂದ ಮಳೆ ಬಂದ ಸತ್ಯ ಎಲ್ಲರಿಗೂ ತಿಳಿದ ವಿಚಾರ ಎಂದು ಹೇಳಿದ್ದಾರೆ.