2025 ಕ್ಕೆ ಕ್ಷಯಮುಕ್ತ ಭಾರತದ ಗುರಿ

ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದಿಂದ ರೋಗ ನಿವಾರಣೆ ಸಾಧ್ಯ : ಜಿಲ್ಲಾಧಿಕಾರಿ

ದಾವಣಗೆರೆ, ಜು. 28- ದುಶ್ಚಟಗಳಿಂದ ದೂರ ಇದ್ದು, ಪೌಷ್ಟಿಕ ಆಹಾರವನ್ನು ಸೇವನೆ ಮಾಡುವುದರಿಂದ ಕ್ಷಯರೋಗವನ್ನು ವಾಸಿ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.  

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾ ಕ್ಷಯ ವೇದಿಕೆಯ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕ್ಷಯರೋಗವು ನಿವಾರಣೆಯಾಗಬಹುದಾದ ಕಾಯಿಲೆಯಾಗಿದ್ದು, ರೋಗಿಗಳು ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಮಾಡುವುದರಿಂದ ದೂರ ಇದ್ದು, ಕ್ರಮಬದ್ದವಾಗಿ ಚಿಕಿತ್ಸೆ ಪಡೆದು ಪೌಷ್ಟಿಕ ಆಹಾರಗಳನ್ನು ಉಪಯೋಗಿಸುವುದರಿಂದ ಕ್ಷಯದಿಂದ ಮುಕ್ತಿ ಹೊಂದಬಹುದಾಗಿದೆ ಎಂದರು. 

 ಕ್ಷಯ ಪರೀಕ್ಷೆ ಮಾಡಲು ಜಿಲ್ಲೆಯ ಎಲ್ಲಾ 95 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೈಕ್ರೋಸ್ಕೋಪಿಕ್ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ನ್ಯಾಟ್ ಕೇಂದ್ರಗಳಿದ್ದು, ಇವುಗಳ ಮೂಲಕ ಕ್ಷಯ ಪರೀಕ್ಷೆ ಮಾಡಲಾಗುತ್ತದೆ. 2023 ರ ಜನವರಿಯಿಂದ ಜೂನ್ ವರೆಗೆ 2244 ಜನರನ್ನು ಗುರುತಿಸಲಾಗಿದೆ ಮತ್ತು ಖಾಸಗಿ ಆಸ್ಪತ್ರೆಗಳಿಂದ 248, ಸಾರ್ವಜನಿಕ ವಲಯದ ಆಸ್ಪತ್ರೆಗಳಿಂದ 1108 ಸೇರಿ 1356 ಕ್ಷಯ ರೋಗಿಗಳನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ. 

ಜಿಲ್ಲೆಯಲ್ಲಿ ಪ್ರಸ್ತುತ 1219  ಕ್ಷಯರೋಗದಿಂದ ಬಳಲುತ್ತಿರುವವರಿದ್ದು, ಇದರಲ್ಲಿ 54 ಜನರು ಹೆಚ್‍ಐವಿ ಸೋಂಕಿನಿಂದ ಬಳಲುತ್ತಿದ್ದು, 205 ಮಧುಮೇಹದಿಂದ ಬಳಲುತ್ತಿದ್ದಾರೆ. ಕ್ಷಯ ಪೀಡಿತರಲ್ಲಿ 134 ಜನರು ಮದ್ಯಪಾನ ಮಾಡುವುದರಿಂದ ಕ್ಷಯರೋಗಿಗಳಾಗಿದ್ದಾರೆ ಮತ್ತು 194 ಜನರು ತಂಬಾಕು, ಧೂಮಪಾನ ಸೇವನೆಯಿಂದ ಕ್ಷಯರೋಗಿಗಳಾಗಿದ್ದಾರೆ. ತಾಲ್ಲೂಕುವಾರು ವಿವರದನ್ವಯ ಚನ್ನಗಿರಿ 148, ದಾವಣಗೆರೆ ಗ್ರಾಮೀಣ 162, ನಗರ 532, ಹರಿಹರ 136, ಹೊನ್ನಾಳಿ 109, ಜಗಳೂರು 132 ಜನರಿದ್ದಾರೆ. 

ಕೇಂದ್ರ ಸರ್ಕಾರದ ನಿಕ್ಷಯ್ ಯೋಜನೆಯಡಿ ಪ್ರತಿ ರೋಗಿಗೆ ಚಿಕಿತ್ಸಾ ಅವಧಿಯಲ್ಲಿ ತಿಂಗಳಿಗೆ ರೂ.500 ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಕ್ಷಯ ರೋಗ ಪೀಡಿತರು ಯಾವುದೇ ರೀತಿಯ ಮಾನಸಿಕವಾಗಿ ಖಿನ್ನತೆಗೆ ಒಳಗಾಗದೇ ನಿರಂತರವಾಗಿ ಚಿಕಿತ್ಸೆ ಪಡೆಯುವುದರಿಂದ ಬೇಗ ಗುಣಮುಖರಾಗ ಬಹುದಾಗಿದೆ. 2025 ಕ್ಕೆ ಕ್ಷಯ ಮುಕ್ತ ಭಾರತವನ್ನಾಗಿಸುವ ಗುರಿ ಹೊಂದಲಾಗಿದ್ದು ಜಿಲ್ಲೆಯಲ್ಲಿಯೂ ಕ್ಷಯ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಸಮೀಕ್ಷೆ ಕಾರ್ಯವನ್ನು ಮಾಡಿಸಲಾಗುತ್ತದೆ ಎಂದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಚನ್ನಗಿರಿ ತಾಲ್ಲೂಕಿನಲ್ಲಿ ಅಪೌಷ್ಟಿಕತೆ ಮತ್ತು ಕ್ಷಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಹೆಚ್ಚಿನ ನಿಗಾವಹಿಸಬೇಕು. ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆರೋಗ್ಯ ಸುಧಾರಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕೆ.ಹೆಚ್.ಗಂಗಾಧರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

error: Content is protected !!