ಉಕ್ಕಡಗಾತ್ರಿ – ಪತ್ತೇಪುರ ರಸ್ತೆ ಸಂಚಾರಕ್ಕೆ ಮುಕ್ತ
ಮಲೇಬೆನ್ನೂರು, ಜು.27- ಮಲೆನಾಡಿನಲ್ಲಿ ಮಳೆ ಅರ್ಭಟ ಬುಧವಾರವೂ ಕಡಿಮೆಯಾಗಿದ್ದು, ನದಿಗಳಲ್ಲಿ ನೀರಿನ ಹರಿವೂ ಇಳಿಮುಖವಾಗಿದೆ. ಭದ್ರಾ ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 28,296 ಕ್ಯೂಸೆಕ್ಸ್ ಇದ್ದ ಒಳಹರಿವು ಸಂಜೆ ಕಡಿಮೆಯಾಗಿದೆ ಎಂದು ಹೇಳ ಲಾಗಿದೆ. ಜಲಾಶಯದ ನೀರಿನ ಮಟ್ಟ ಗುರುವಾರ ಸಂಜೆ 159 ಅಡಿಯಾಗಿತ್ತು.
ಗಾಜನೂರಿನ ತುಂಗಾ ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 39 ಸಾವಿರ ಕ್ಯೂಸೆಕ್ಸ್ ಇದ್ದ ಒಳಹರಿವು ಸಂಜೆ 22 ಸಾವಿರ ಕ್ಯೂಸೆಕ್ಸ್ಗೆ ಇಳಿಕೆ ಕಂಡಿದೆ. ತುಂಗಾ ಜಲಾಶಯದಿಂದ ಬುಧವಾರ 40 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿತ್ತು. ಗುರುವಾರ ಆ ಪ್ರಮಾಣ 20 ಸಾವಿರಕ್ಕೆ ಇಳಿದಿದೆ. ಇದರಿಂದಾಗಿ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿಯಲ್ಲಿ ಸುಮಾರು 4 ಅಡಿಯಷ್ಟು ನೀರು ಇಳಿದಿದೆ. ನದಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಉಕ್ಕಡಗಾತ್ರಿ – ಪತ್ತೇಪುರ ಸಂಪರ್ಕ ಸೇತುವೆ ಗುರುವಾರ ಸಂಜೆ ಸಂಚಾರಕ್ಕೆ ಮುಕ್ತವಾಗಿದೆ.