ಮಹಿಳೆಯ ಬೆತ್ತಲೆ ಮೆರವಣಿಗೆ: ಪ್ರಧಾನಿ, ಗೃಹ ಸಚಿವರ ರಾಜೀನಾಮೆಗೆ ಒತ್ತಾಯ

ದಾವಣಗೆರೆ, ಜು. 21- ಮಣಿಪುರದ ಜನಾಂಗೀಯ ಗಲಭೆ ಹಾಗೂ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣದ ಹಿನ್ನೆಲೆಯಲ್ಲಿ  ನೈತಿಕ ಹೊಣೆ ಹೊತ್ತು ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕೆಂದು ಪೀಪಲ್ಸ್ ಲಾಯರ್ಸ್ ಗಿಲ್ಡ್  ರಾಜ್ಯ ಸಂಚಾಲಕ ಅನೀಸ್ ಪಾಷ ಒತ್ತಾಯಿಸಿದ್ದಾರೆ.

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳ ಅದರಲ್ಲೂ ಮಹಿಳೆಯರ ರಕ್ಷಣೆಯು ಸರ್ಕಾರದ ಮೇಲಿದೆ. ಇತ್ತೀಚೆಗೆ ಸುಮಾರು 79 ದಿನಗಳಿಂದ ಮಣಿಪುರದಲ್ಲಿ ಜನಾಂಗೀಯ ಗಲಭೆಗಳು ನಡೆಯುತ್ತಿದ್ದು, 150 ಕ್ಕೂ ಹೆಚ್ಚು ಜನರ ಬಲಿಯಾಗಿದೆ. 40 ಸಾವಿರ ಜನ ನಿರಾಶ್ರಿತರಾಗಿದ್ದಾರೆ ಹಾಗೂ ಕೋಟ್ಯಾಂತರ ನಷ್ಟವಾಗಿದೆ. 

ಜನಾಂಗೀಯ ಗಲಭೆಯಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಮೇ 18 ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಹೊಲಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೃತ್ಯ ಇಡೀ ಪ್ರಪಂಚದ ಮುಂದೆ ನಮ್ಮ ದೇಶ ತಲೆ ತಗ್ಗಿಸುವಂತಹದ್ದಾಗಿದೆ ಎಂದು ಹೇಳಿದ್ದಾರೆ.

ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡ ಪ್ರಧಾನ ಮಂತ್ರಿಗಳು ಪತ್ರಕರ್ತರ ಮುಂದೆ ಹಾಜರಾಗಿ ಸಣ್ಣ ಹೇಳಿಕೆಯನ್ನು ನೀಡಿ, ಜನ ಸಾಮಾನ್ಯರು ಆಕ್ರೋಶಗೊಳ್ಳದಂತೆ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ. 

ದಂಗೆ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಪ್ರಧಾನಮಂತ್ರಿಗಳು ತಮ್ಮ ಪ್ರಜೆಗಳಿಗೆ ರಕ್ಷಣೆಯನ್ನು ನೀಡಲು ಕ್ರಮ ತೆಗೆದುಕೊಳ್ಳುವ ಬದಲಿಗೆ ನಿನ್ನೆಯವರೆಗೆ ಚಕಾರವೆತ್ತದೆ ಚುನಾವಣಾ ಪ್ರಚಾರದ ಪ್ರವಾಸದಲ್ಲಿ ನಿರತರಾಗಿರುವುದರಿಂದಲೇ ದುಷ್ಕೃತ್ಯಗಳು ಹೆಚ್ಚಾಗಲು ಕಾರಣವಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಾಂಗೀಯ ಗಲಭೆಗಳನ್ನು ಗಂಭೀರವಾಗಿ ಪರಿಗಣಿಸಿ, ತೀವ್ರ ಕ್ರಮ ಕೈಗೊಂಡಿದ್ದರೆ, ಅನಾಹುತಗಳು ನಡೆಯುತ್ತಿರಲಿಲ್ಲ.

ನಿರ್ಲಕ್ಷತನ ಮತ್ತು ತಪ್ಪಿಗೆ ನೈತಿಕ ಹೊಣೆಹೊತ್ತು ತಕ್ಷಣ ರಾಜಿನಾಮೆ ನೀಡಬೇಕು. ತಪ್ಪಿದ್ದಲ್ಲಿ ಇಡೀ ರಾಜ್ಯಾದ್ಯಂತ ಗಿಲ್ಡ್ ಇತರೆ ಸಂಘಟನೆಗಳೊಂದಿಗೆ ಸೇರಿ ಕಾನೂನಾತ್ಮಕವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಅನೀಸ್ ಪಾಷ ಎಚ್ಚರಿಕೆ ನೀಡಿದ್ದಾರೆ.

error: Content is protected !!