10 ರೂಪಾಯಿ ನೋಟು ಬೀಳಿಸಿ 1.10 ಲಕ್ಷ ಎಗರಿಸಿದ ಕಳ್ಳರು

ಹರಿಹರ, ಜು. 14- 10 ರೂಪಾಯಿ ಮುಖ ಬೆಲೆಯ ಐದು ನೋಟುಗಳನ್ನು ರಸ್ತೆ ಮೇಲೆ ತೋರಿಸಿ, ಬೈಕ್‌ನಲ್ಲಿದ್ದ 1.10 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಹರಿಹರ ನಗರದ ಹಳೇ ಪಿಬಿ ರಸ್ತೆಯ ಬಳಿಯ ಕೆನರಾ ಬ್ಯಾಂಕ್ ಮುಂಭಾಗ ನಡೆದಿದೆ.

ಹರಿಹರ ತಾಲ್ಲೂಕು ಬನ್ನಿಕೋಡು ಗ್ರಾಮದ ಎಂ.ಆರ್. ರಾಮಪ್ಪ ಅವರು ಭತ್ತ ಬೆಳೆದು, ಅದರಿಂದ ಬಂದ  ಹಣ ರೂ. 1.10 ಲಕ್ಷ ಗಳನ್ನು ತಮ್ಮ ಪತ್ನಿ ರತ್ನಮ್ಮ ಅವರ ಕೆನರಾ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ್ದರು. 

ಗುರುವಾರ ಹಣ ಬಿಡಿಸಿಕೊಂಡು ಬರಲು ಪತ್ನಿ ಜೊತೆ ಬೈಕ್‌ನಲ್ಲಿ ಹರಿಹರ ನಗರಕ್ಕೆ ಬಂದು, 1.10 ಲಕ್ಷ ರೂ. ಹಣ ಬಿಡಿಸಿಕೊಂಡು ಪ್ಲಾಸ್ಟಿಕ್ ಕವರ್‌ನಲ್ಲಿ ಹಣ ಹಾಗೂ ಪಾಸ್ ಬುಕ್, ಆಧಾರ್ ಕಾರ್ಡ್‌ ಇಟ್ಟುಕೊಂಡು ಬೈಕ್‌ ಸೈಡ್ ಬ್ಯಾಗ್‌ನಲ್ಲಿ ಕವರ್ ಇಟ್ಟಿದ್ದಾರೆ. 

ಆಗ ಯಾರೋ ಒಬ್ಬ ವ್ಯಕ್ತಿ ಬಂದು ನಿಮ್ಮ ಹಣ ಕೆಳಗೆ ಬಿದ್ದಿದೆ ಎಂದು ಹತ್ತು ರೂಪಾಯಿಯ ಐದು ನೋಟುಗಳನ್ನು ತೋರಿಸಿದ್ದಾರೆ. ಇವರು ಬಿದ್ದ  ನೋಟುಗಳನ್ನು ತೆಗೆದುಕೊಂಡು ಬೈಕ್ ಹತ್ತಿಕೊಂಡು ಹೋಗಿದ್ದು, ತುಸು ಸಮಯದ ನಂತರ ಸೈಡ್ ಕವರ್ ನೋಡಿದಾಗ ಹಣದ ಕವರ್ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!