ಪಿಯುಸಿ ಫಲಿತಾಂಶಕ್ಕೆ ಆಂತರಿಕ ಅಂಕ ಪರಿಗಣನೆ : ಎಐಎಸ್‌ಡಿಓ ಆಕ್ಷೇಪ

ದಾವಣಗೆರೆ, ಜು.13- ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಆಂತರಿಕ ಅಂಕ ಪರಿಗಣಿಸುವ ಸರ್ಕಾರದ ನಿರ್ಧಾರದ ಬಗ್ಗೆ ಎಐಎಸ್‌ಡಿಓ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ಸಂಘಟನೆಯ   ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್  ತಿಳಿಸಿದ್ದಾರೆ.

 ಮೊದಲನೆಯದಾಗಿ, ಯಾವುದೇ ಹೊಸ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ತೆಗೆದುಕೊಳ್ಳಬೇಕು ಮತ್ತು ಪರೀಕ್ಷೆಯ ರೂಪುರೇಷೆಯನ್ನು ಶಿಕ್ಷಣ ತಜ್ಞರನ್ನು ಒಳಗೊಂಡು ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕ ರೂಪಿಸಬೇಕು. ಆದರೆ ಪ್ರಸ್ತುತ ನಿರ್ಧಾರವು ಶೈಕ್ಷಣಿಕ ವರ್ಷ ಆರಂಭಗೊಂಡ ಬಳಿಕ ಬಂದಿದೆ ಹಾಗೂ ಯಾವುದೇ ಚರ್ಚೆಗಳು ಇಲ್ಲದೇ, ಅಪ್ರಜಾತಾಂತ್ರಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. 

ಎರಡನೆಯದಾಗಿ ಸದಾ ಕಾಲ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಒತ್ತಡದಲ್ಲಿ ಇರುತ್ತಾರೆ, ಈ ಆಂತರಿಕ ಅಂಕ ಎನ್ನುವುದು ಅವರಲ್ಲಿ ಅನಗತ್ಯ ಒತ್ತಡವನ್ನು ಹೇರುತ್ತದೆಯೇ ವಿನಃ ಅವರನ್ನು ಒತ್ತಡ ಮುಕ್ತರನ್ನಾಗಿ ಮಾಡುವುದಿಲ್ಲ. ಶಿಕ್ಷಣದಲ್ಲಿ ಯಾವುದೇ ನೀತಿಗಳನ್ನು ತರುವ ಉದ್ದೇಶವು ವಿದ್ಯಾರ್ಥಿಗಳಲ್ಲಿ ಜ್ಞಾನ, ವ್ಯಕ್ತಿತ್ವ ಬೆಳೆಸಲು ಅನುವು ಮಾಡಿಕೊಡಬೇಕು. ಆದರೆ ಆಂತರಿಕ ಅಂಕ ಎಂಬ ಪ್ರಕ್ರಿಯೆಯು ಇದಕ್ಕೆ ಒತ್ತು ನೀಡದೆ, ಅಂಕ ಗಳಿಸಿ, ಉತ್ತೀರ್ಣ ಹೊಂದುವುದನ್ನೇ ಶಿಕ್ಷಣದ ಧ್ಯೇಯವನ್ನಾಗಿಸುತ್ತದೆ. 

ಕಡೆಯದಾಗಿ, ವಿಜ್ಞಾನ ವಿಭಾಗದಲ್ಲಿ ಪ್ರಾಯೋಗಿಕ ವಿಷಯಕ್ಕೆ ಪರೀಕ್ಷೆಯ ಅಗತ್ಯವಿದ್ದು, ಅದಕ್ಕೆ 30 ಅಂಕಗಳನ್ನು ನಿಗದಿಪಡಿಸಿರುವ ಹಾಗೆ, ಪ್ರಾಯೋಗಿಕ ವಿಷಯಗಳು ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಮಾಡುವ ಅಗತ್ಯವಿಲ್ಲ. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ 20 ಅಂಕಗಳು ಶಿಕ್ಷಕರ ಹಿಡಿತಕ್ಕೆ ಬರುತ್ತದೆ ಮತ್ತು ಅದು ಒಳ್ಳೆಯ ಸಂಕೇತವಲ್ಲ. ಶಿಕ್ಷಣದ ವ್ಯಾಪಾರೀಕರಣ ಉದ್ದೇಶ ಹೊಂದಿರುವ ಖಾಸಗಿ ಕಾಲೇಜುಗಳು ಇದನ್ನು ದುರುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳನ್ನು ಕಿರುಕುಳಕ್ಕೆ ಒಳಪಡಿಸುವುದು ಖಚಿತ ಎಂದು ಕಾಮತ್ ಅಭಿಪ್ರಾಯಿಸಿದ್ದಾರೆ.

ಈ ಕೂಡಲೇ ರಾಜ್ಯ ಸರ್ಕಾರ ಆಂತರಿಕ ಅಂಕ ಪರಿಗಣಿಸುವ ನಿರ್ಧಾರವನ್ನು ಕೈ ಬಿಡಬೇಕೆಂದು ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಒತ್ತಾಯಿಸಿದ್ದಾರೆ.

error: Content is protected !!