`ವಿದ್ಯುತ್ ಬಿಲ್ ಕಟ್ಟಬೇಡಿ; ಬಸ್ ಟಿಕೆಟ್ ಕೇಳಬೇಡಿ’

`ವಿದ್ಯುತ್ ಬಿಲ್ ಕಟ್ಟಬೇಡಿ; ಬಸ್ ಟಿಕೆಟ್ ಕೇಳಬೇಡಿ' - Janathavaniಹೊನ್ನಾಳಿ, ಮೇ 26- ಸಾರ್ವಜನಿಕರು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟಬಾರದು. ಬಿಲ್ ಕೇಳಲು ಬಂದರೆ ಅವರನ್ನು ವಾಪಸ್ಸು ಕಳುಹಿಸುವಂತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಲಹೆ ನೀಡಿದರು.  

ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.

 ಅಲ್ಲದೇ ಮಹಿಳೆಯರು ಬಸ್ ಹತ್ತಿದಾಗ ಅವರ ಬಳಿ ಯಾವುದೇ ಕಾರಣಕ್ಕೂ ಟಿಕೆಟ್ ಕೇಳಬಾರದು ಎಂದು ನಿರ್ವಾಹಕರಿಗೆ ಮನವಿ ಮಾಡಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಿದ್ದು, ಕೊಟ್ಟ ಮಾತಿನಂತೆ ಅವರು ನಡೆದುಕೊಂಡು ಐದು ಭರವಸೆಗಳನ್ನು ಈಡೇರಿಸಬೇಕು, ಇಲ್ಲದೇ ಇದ್ದರೇ ವಚನ ಭ್ರಷ್ಟರಾಗುತ್ತೀರಿ ಎಂದರು.

ನಾವೂ ಕೂಡಾ, ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರುಸುತ್ತಿದೆಯಾ   ಎಂದು ಕಾದು ನೋಡುತ್ತೇವೆ, ಒಂದು ವೇಳೆ ಸರ್ಕಾರ ಭರವಸೆಗಳನ್ನು ಜಾರಿ ಮಾಡದೇ ಇದ್ದರೇ ಮುಂದಿನ  ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ರೇಣುಕಾಚಾರ್ಯ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಹನುಮಂತಪ್ಪ, ಚಂದ್ರಶೇಖರ್‍ಗೌಡ, ಮುಖಂಡರಾದ ನಾಗರಾಜ್, ಹೇಮೇಶ್, ಯೋಗೀಶ್, ದೇವೇಂದ್ರಪ್ಪ, ಬಸವರಾಜಪ್ಪ, ಗಂಗಾಧರ್ ಸ್ವಾಮಿ, ಸತೀಶ್ ಗೌಡ, ಕರಿಯಪ್ಪ, ಹನುಮಂತ ಸೇರಿದಂತೆ ಮತ್ತಿತರರಿದ್ದರು.

error: Content is protected !!