ನಗರದಲ್ಲಿ ನಾಳೆ ಕೃಷಿ ಪದವಿಗಳ ಪ್ರವೇಶಕ್ಕಾಗಿ ಪ್ರಾಯೋಗಿಕ ಪರೀಕ್ಷೆಗೆ ತರಬೇತಿ

ದಾವಣಗೆರೆ, ಮೇ 21- ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೃಷಿ ಕೋಟಾದಡಿಯಲ್ಲಿ ಕೃಷಿಗೆ ಸಂಬಂಧಿಸಿದ ಪದವಿಗಳಿಗೆ ಪ್ರವೇಶ ಪಡೆಯಲು ಇರುವ ಪ್ರಾಯೋಗಿಕ ಪರೀಕ್ಷೆಗೆ ತರಬೇತಿ ಕಾರ್ಯಕ್ರಮ ವನ್ನು ನಾಡಿದ್ದು ದಿನಾಂಕ 23 ರ ಮಂಗಳವಾರ ನಗರದ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ.ಎನ್. ದೇವರಾಜ್ ತಿಳಿಸಿದ್ದಾರೆ.

ಕೃಷಿ ಪದವಿಗಳಿಗೆ ಪ್ರವೇಶ ಬಯಸುವ ಕೃಷಿಕರ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಿದ್ದು, ಇದರ ಸದುಪಯೋಗ ಪಡೆಯುವಂತೆ ಕೋರಿದ್ದಾರೆ.

ಪ್ರಸ್ತುತ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ತಯಾರು ಮಾಡುವ ಕುರಿತು, ಸಿಇಟಿ ಮುಂದಿನ ಕ್ರಮಗಳ ಬಗ್ಗೆ ಹಾಗೂ ಕೃಷಿ ಪದವಿ ಕೋರ್ಸ್‌ಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಲಾಗುವುದು ಎಂದು ಕೇಂದ್ರದ ತೋಟಗಾರಿಕೆ ತಜ್ಞರಾದ ಎಂ.ಜಿ.ಬಸವನಗೌಡ ತಿಳಿಸಿದ್ದಾರೆ. ಈಗಾಗಲೇ ತರಬೇತಿ ಪಡೆದಿರುವ 284 ವಿದ್ಯಾರ್ಥಿಗಳು ರಾಜ್ಯದ ವಿವಿಧ ಕೃಷಿ, ತೋಟಗಾರಿಕೆ ಮತ್ತು ಪಶು ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುತ್ತಾರೆ. ತರಬೇತಿ ಒಂದು ದಿನದ್ದಾಗಿದ್ದು, ಪ್ರವೇಶ ಶುಲ್ಕ 500 ರೂ. ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ತರಬೇತಿಯ ಸಂದರ್ಭದಲ್ಲಿ ವಿದ್ಯಾರ್ಥಿಯ ಜೊತೆಗೆ ಒಬ್ಬರು ಪೋಷಕರು ಬಂದರೆ ಸಿಇಟಿಯ ಕ್ರಮಗಳನ್ನು ತಿಳಿದುಕೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ.

ವಿವರಕ್ಕೆ ಸಂಪರ್ಕಿಸಿ : 08192-263462, 297142.

error: Content is protected !!