ಶ್ರೀ ಅನ್ನದಾನೀಶ್ವರ ಮಠವು ಜಾತಿ, ಮತ, ಪಂಥ ಮೀರಿದ ಮಠ

ಶ್ರೀ ಅನ್ನದಾನೀಶ್ವರ ಮಠವು ಜಾತಿ, ಮತ, ಪಂಥ ಮೀರಿದ ಮಠ

ಹಾಲಕೆರೆ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ

ದಾವಣಗೆರೆ, ಮಾ.10- ಉದ್ಯಮಿ ಅಥಣಿ ವೀರಣ್ಣನವರಿಗೆ ಗೌರವ ಡಾಕ್ಟರೇಟ್ ಬಂದಿರುವುದು, ಅನ್ನದಾನೀಶ್ವರ ಮಠಕ್ಕೇ ನೀಡಿದಷ್ಟು ಸಂತೋಷವಾಗಿದೆ ಎಂದು ಹಾಲಕೆರೆ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಅನ್ನದಾನೀಶ್ವರ ಮಠದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಟ್ರಸ್ಟ್ ಅಧ್ಯಕ್ಷ ಅಥಣಿ ವೀರಣ್ಣ ಅವರಿಗೆ ಶುಕ್ರವಾರ ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಅಥಣಿ ವೀರಣ್ಣನವರು ಶ್ರೀಮಠದ ಅಧ್ಯಕ್ಷರಾಗಿ ಅಲ್ಲದೇ, ಹಲವಾರು, ಮಠ, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯೊಂದಿಗೆ ಹಿರಿಯ ಲೆಕ್ಕ ಪರಿಶೋಧಕರಾಗಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ ಎಂದರು.

ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್‌ನಿಂದ ಇಲ್ಲಿ ಕಲ್ಯಾಣ ಮಂಟಪ ಕಟ್ಟುವ ಯೋಜನೆ ನಮ್ಮೆಲ್ಲರ ಉದ್ಧೇಶವಾಗಿದೆ. ಈ ಹಿಂದೆ ಕಲ್ಯಾಣ ಮಂಟಪ ಕಟ್ಟಲು ವಾಗ್ದಾನ ಮಾಡಿದಂತೆ ದಾನಿಗಳು ಸಹಾಯ ಮಾಡಬೇಕು. ಅಥಣಿ ವೀರಣ್ಣನವರ ಮಾರ್ಗದರ್ಶನದಲ್ಲಿ ಟ್ರಸ್ಟ್‌ನ ಅಡಿವೆಪ್ಪ, ವೀರಪ್ಪ  ಎಂ.  ಬಾವಿ ಎಲ್ಲರೂ ಮುಂದಾಳತ್ವ ವಹಿಸಿಕೊಂಡು, ದಾನಿಗಳಿಂದ ಧನ ಸಹಾಯ ಪಡೆದು, ಕಟ್ಟಡ ಕಾರ್ಯಕ್ರಮ ಆರಂಭಿಸಬೇಕೆಂದು  ಕರೆ ನೀಡಿದರು.

ಶ್ರೀ ಅನ್ನದಾನೀಶ್ವರ ಮಠವು ಜಾತಿ, ಮತ, ಪಂಥ ಮೀರಿದ ಮಠವಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಮ್ಮ ಹಿರಿಯ ಗುರುಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ, ಪ್ರಸಾದಕ್ಕೆ ಒತ್ತುನೀಡಿ ಮಠವನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ನಾವು ನೀವೆಲ್ಲರೂ ಸೇರಿ ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಅಥಣಿ ವೀರಣ್ಣ ಮಾತನಾಡಿ, ಶ್ರೀಗಳಿಂದ ನನಗೆ ಇಲ್ಲಿ ಗೌರವಿಸಿರುವುದು ನನಗೆ ಸಂತೋಷ ತಂದಿದೆ. ಶ್ರೀಗಳ ಭಕ್ತರ ಆಶಯದಂತೆ ಇಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ.ಅವಶ್ಯಕತೆ ಇದೆ. ಶ್ರೀಗಳು ದಾನಿಗಳ ಮನೆಗೆ ಪಾದಪೂಜೆಗೆ ಬರುವುದಾಗಿ ತಿಳಿಸಿದ್ದಾರೆ. ಕಲ್ಯಾಣ ಮಂಟಪ ಆಗಲೇಬೇಕು.  ಈ ಕಲ್ಯಾಣ ಮಂಟಪ ಬಡವ, ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಬೇಕು. ದಾನಿಗಳ ಸಹಕಾರದಿಂದ ಕಲ್ಯಾಣ ಮಂಟಪ
ಕಟ್ಟಿಸೋಣ. ಕಡಿಮೆ ಆದರೆ ಸಾಲ ತೆಗೆದುಕೊಂಡು ಕಟ್ಟಿಸೋಣ ಎಂದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಅರ್ಬನ್ ಬ್ಯಾಂಕ್‌ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ,  ನಿರ್ದೇಶಕ ದೇವರಮನಿ ಶಿವಕುಮಾರ್, ಉದ್ಯಮಿಗಳಾದ ವೈ.ಬಿ.ಸತೀಶ್, ಜಿ.ಎಸ್. ಉಳವಯ್ಯ, ಟ್ರಸ್ಟ್ ಉಪಾಧ್ಯಕ್ಷ ಅಮರಯ್ಯ ಗುರುವಿನಮಠ, ಕೆ.ಟಿ. ಮಹಾಲಿಂಗೇಶ್,  ಅಡಿವೆಪ್ಪ ಸೇರಿದಂತೆ ಇತರರು ಇದ್ದರು. 

ಇಂದಿನ ಸುದ್ದಿ ಸಂಪಾದಕ ವೀರಪ್ಪ ಎಂ.ಭಾವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: Content is protected !!