ಜಗಳೂರು,ಮಾ.3- ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಎಣ್ಣೆ ಕಾಳು ಯೋಜನೆ ಅಡಿಯ ಗುಚ್ಚ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆ ತಾಕುಗಳಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ರೈತರಿಗೆ ಸಲಹೆ ನೀಡಿದರು.
ಶೇಂಗಾದಲ್ಲಿ ಜಿಗಿ ಹುಳುವಿನ ಬಾಧೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ನಿಯಂತ್ರಣಕ್ಕೆ ಕ್ಲೋರೋಪೈರಿಪಾಸ್, ಸೈಪರ್ ಮೆತ್ರಿನ್ ಎರಡು ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕಾಗಿದೆ. ಅದೇ ರೀತಿಯಲ್ಲಿ ಎಲೆಚುಕ್ಕಿ ರೋಗ ಕಂಡು ಬಂದಲ್ಲಿ ಮೆಟಲಾಕ್ಸಿಲ್, ಮ್ಯಾಂಕೊಜಟ್ 2 ಗ್ರಾಮ ಪ್ರತಿ ಲೀಟರ್ನಂತೆ ಸಿಂಪರಣೆ ಮಾಡಬೇಕು ಎಂದು ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ. ಜಿ. ರೈತರಿಗೆ ತಿಳಿಸಿಕೊಟ್ಟರು. ಬೇಸಾಯ ತಜ್ಞ ಮಲ್ಲಿಕಾರ್ಜುನ್, ನೀರನ್ನು ಸರಿಯಾದ ಸಮಯಕ್ಕೆ ಒದಗಿಸಿದರೆ ಮಾತ್ರ ಉತ್ತಮ ಇಳುವರಿ ಪಡೆಯಬಹುದು ಎಂದರು.