ಮೀಸಲಾತಿ ವರದಿಗಳ ಅನುಷ್ಠಾನಕ್ಕೆ ಡಿಎಸ್-4 ಸಂಘಟನೆಯಿಂದ ಮನವಿ

ಹರಿಹರ, ಸೆ.20- ರಾಜ್ಯ ಸರ್ಕಾರದ ಬಳಿ ಇರುವ ಜನ ಸಂಖ್ಯೆಗನುಗುಣವಾಗಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವಂತೆ ನ್ಯಾ. ಸದಾಶಿವ ಆಯೋಗದ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ನ್ಯಾ.ನಾಗಮೋಹನದಾಸ್‌ ವರದಿಗಳನ್ನು ವಿಧಾನಸಭೆಯಲ್ಲಿ ಚರ್ಚಿಸಲು ಒತ್ತಾಯಿಸಿ, ಹರಿಹರ ತಾಲ್ಲೂಕು ಡಿಸ್-4 ಸಂಘಟನೆಯಿಂದ ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಎರಡೂ ಆಯೋಗಗಳ ವರದಿಗಳನ್ನು ವಿಧಾನ ಸಭೆಯ ಅಧಿವೇಶನದಲ್ಲಿ ಕೂಲಂಕುಷವಾಗಿ ಚರ್ಚಿಸಿ, ಶಿಫಾರಸ್ಸಿನೊಂದಿಗೆ ಕೇಂದ್ರ ಸರ್ಕಾರಕ್ಕೆ ರವಾನಿಸಲು ಡಿಎಸ್-4 ಸಂಘಟನೆ ಒತ್ತಾಯಿಸುತ್ತಿದೆ ಎಂದು ಮುಖಂಡರುಗಳು ತಿಳಿಸಿ, ಶಾಸಕರಿಗೆ ದಮನಿತರ ದನಿಯಾಗಿ ಚರ್ಚಿಸಲು ಮನವಿ ನೀಡಿರುವುದಾಗಿ ಒತ್ತಾಯಿಸಿದರು.

ಇತ್ತೀಚೆಗೆ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ, ಮೀಸಲಾತಿ ನೀಡುವುದು ಎಂದರೆ ಯಾವುದೇ ಜಾತಿಗಳಿಗೆ ಹೊರಗೆ ಇರಿಸಿದಂತೆ ಅಲ್ಲ. ಏಕೆಂದರೆ ಯಾವ ಜಾತಿಗೂ ಮೀಸಲಾತಿ ನಿರಾಕರಣೆ ಯಾಗುವುದಿಲ್ಲ. ಸಾಕಷ್ಟು ಪ್ರಾತಿನಿಧ್ಯವಿರುವ ಮುಂದು ವರೆದ ಕೆನೆಪದರಕ್ಕೆ ಸೇರಿದ ಕೆಲವು ಜಾತಿಗಳು ಈ ಸೌಲಭ್ಯ ಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿ ಕೊಂಡಿವೆ. ಇದು ಮೀಸಲಾತಿ ಉದ್ದೇಶಕ್ಕೆ ತದ್ವಿರುದ್ಧ ವಾಗಿದೆ ಎಂದು ಮುಖಂಡರುಗಳು ತಿಳಿಸಿದರು.

ಮನವಿ ನೀಡುವ ಸಮಯದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ನೋಟದವರ್, ತಾಲ್ಲೂಕು ಅಧ್ಯಕ್ಷ ಎಂ.ಮಂಜುನಾಥ್, ಜಿಲ್ಲಾ ಸಮಿತಿಯ ವಿನಾಯಕ, ನಾಮದೇವ, ದಲಿತ ಮುಖಂಡ ಸಿ.ನಾಗರಾಜ್,‌ ಸಂಘಟನೆಯ ಮಾರುತಿ, ಗೋಪಿ ,‌ ಬಿ.ಎಂ.ಭಾಸ್ಕರ್, ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!