ಕೆರೆ ತುಂಬಿಸುವ ಯೋಜನೆ : ಜನಜಾಗೃತಿಗಾಗಿ ಕರಪತ್ರ ಅಭಿಯಾನ

ಜಗಳೂರು, ಆ.10- 57 ಕೆರೆಗಳಿಗೆ ನೀರು ತುಂಬಿಸುವ ದೀಟೂರು ಏತ ನೀರಾವರಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಇಂದು ಕರಪತ್ರ ಹಂಚಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ತಜ್ಞರ ಸಮಿತಿ ಸದಸ್ಯರಾದ ಕೆ.ಬಿ.ಕಲ್ಲೇರುದ್ರೇಶ್ ಮತ್ತು ತಾಲ್ಲೂಕಿನ ವಿವಿಧ ಭಾಗದ ರೈತರು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ನಂತರ ಮಾತನಾಡಿದ ಸಮಿತಿಯ ಸದಸ್ಯ ಕಲ್ಲೇರುದ್ರೇಶಪ್ಪ, ತುಂಗಭದ್ರಾ ನದಿಯ ದೀಟೂರು ಏತ ನೀರಾವರಿ ಜಗಳೂರು ವಿಧಾನಸಭಾ ಕ್ಷೇತ್ರದ 53 ಕೆರೆಗಳನ್ನು ತುಂಬಿಸುವ 650 ಕೋಟಿ ರೂ.ಗಳ ಯೋಜನೆಯೂ ಇಂತಹ ಕೋವಿಡ್ ಕಾಲಘಟ್ಟದ ದುಸ್ಥಿತಿಯಲ್ಲಿ ಕಾಮಗಾರಿಗಳು ನಡೆಯುವುದಕ್ಕೆ ಪೂಜ್ಯರ ಆಶೀರ್ವಾದವೇ ಸಾಕ್ಷಿ ಎಂದರು.

ಇಂತಹ ಯೋಜನೆ ಎಂಎಲ್ಎ, ಎಂಪಿ, ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಸೀಮಿತವೆಂದು ಭಾವಿಸದೇ ಆ ಭಾಗದ ಸ್ಥಳೀಯ ರೈತ ಬಾಂಧವರು, ಯುವಕರು ಯೋಜನೆಯ ರೂಪು-ರೇಷೆಗಳನ್ನು, ಕಾಮಗಾರಿ ಬಗ್ಗೆ ಗಮನಹರಿಬೇಕು ಎಂದರು.

22 ಕೆರೆಗಳ ಕಳಪೆ ಕಾಮಗಾರಿಯ ದುಸ್ಥಿತಿ ಬರಬಾರದೆಂದು ಮನವರಿಕೆ ಮಾಡುತ್ತಾ ತಾಲ್ಲೂಕಿನ ಎಲ್ಲಾ ಗ್ರಾಮದ ರೈತ ಬಾಂಧವರು, ಪತ್ರಿಕಾ ಮಾಧ್ಯಮದವರು, ಯುವಕ ಮಿತ್ರರು ಸೇರಿಕೊಂಡು ಕಾಮಗಾರಿಯ ಸ್ಥಳದಲ್ಲಿ ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಿ, ಗುಣಾತ್ಮಕವಾಗಿ ತಾಂತ್ರಿಕವಾಗಿ ಯೋಜನೆಯ ರೂಪುಗೊಳ್ಳಬೇಕೆಂದು ಸಭೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

ತಮ್ಮ ತಮ್ಮ ಹಳ್ಳಿಗಳಲ್ಲಿ ಹಾದುಹೋಗುತ್ತಿರುವ ಪೈಪ್‌ಲೈನ್ ಕಾಮಗಾರಿಯ ಸೂಕ್ಷ್ಮತೆಯನ್ನು ಗಮನಿಸಿ, ಪರಾಮರ್ಶಿಸುವ ಹೊಣೆಗಾರಿಕೆಯನ್ನು ನಾವೆಲ್ಲರೂ ಹೊರಬೇಕಾಗುತ್ತದೆ. ಕಾಮಗಾರಿ ಕಳಪೆಯಾಗದಂತೆ ನೋಡಿ ಕೊಳ್ಳಬೇಕು ಎಂದರು.

ಯೋಜನೆಯ ಹರಿಹರ ತಾಲ್ಲೂಕು ದೀಟೂರು ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿ ಜಾಕ್ವೆಲ್ ನಿರ್ಮಾಣ 2400 ಹೆಚ್.ಪಿ ಸಾಮರ್ಥ್ಯದ 8 ಮೋಟಾರುಗಳ ಅಳವಡಿಕೆ ಇದರಿಂದ 1.39 ಟಿಎಂಸಿ ನೀರನ್ನು ಇಲ್ಲಿಂದ ಸುಮಾರು 30 ಕಿಲೋಮೀಟರ್ ದೂರದ ಅಣಜಿ ಸಮೀಪದ ಚಟ್ನಹಳ್ಳಿ ಗುಡ್ಡದವರೆಗೆ ನೀರನ್ನು ವಿದ್ಯುತ್ ಮೂಲಕ ತರುವಂತಹದು. ನಂತರ ಗುರುತ್ವಾಕರ್ಷಣೆ ಮೂಲಕ ಯೋಜನೆಯ ವ್ಯಾಪ್ತಿಯ ಕೆರೆಗಳಿಗೆ ನೀರನ್ನು ಹರಿಸಲಾಗುವುದು. ಈ ಪೈಪನ್ನು ಅಪ್ಪಿ-ತಪ್ಪಿಯೂ ಯಾರು ದುರುಪಯೋಗ ಮಾಡಿಕೊಳ್ಳಬಾರದು. ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

error: Content is protected !!