ಲಾಭದಲ್ಲಿ ಜಿಲ್ಲೆಯ ಸಹಕಾರಿ ಬ್ಯಾಂಕುಗಳಲ್ಲೇ ದಾವಣಗೆರೆ ಅರ್ಬನ್ ಬ್ಯಾಂಕ್ ಪ್ರಥಮ

ದಾವಣಗೆರೆ,ಡಿ.15- ತನ್ನ ಗ್ರಾಹಕರು ಮತ್ತು ಸದಸ್ಯರಿಗೆ ಶೀಘ್ರ ಮತ್ತು ಅತ್ಯುತ್ತಮ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಗಮನ ಸೆಳೆದಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಆನ್ ಲೈನ್ ಮೂಲಕ ಬ್ಯಾಂಕ್ ಖಾತೆ ತೆರೆಯುವ ಸೇವೆಗೆ ಶೀಘ್ರ ಚಾಲನೆ ನೀಡಲಾಗು ವುದು ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಪ್ರಕಟಿಸಿದ್ದಾರೆ.

ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಯಿಂದಾಗಿ ವಿಡಿಯೋ ಕಾನ್ಫರೆನ್ಸ್ – ವೆಬ್ ಕಾಸ್ಟ್ ಮೂಲಕ ಮೊನ್ನೆ ನಡೆದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ವರ್ಚುಯಲ್ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕಿನ ವೆಬ್ ಸೈಟ್ ಮೂಲಕ ಬ್ಯಾಂಕ್ ಖಾತೆ ತೆರೆಯಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆಯಾದರೂ ಅದನ್ನು ಇನ್ನಷ್ಟು ಸರಳೀಕರಣಗೊಳಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. 

ತಮ್ಮ ಬ್ಯಾಂಕ್ ಈಗಾಗಲೇ ಪ್ರಧಾನ ಕಚೇರಿ ಸೇರಿದಂತೆ, 7 ಶಾಖೆಗಳನ್ನು ಹೊಂದಿದ್ದು, ನಿಟುವಳ್ಳಿ ಸುತ್ತಮುತ್ತಲಿನ ಗ್ರಾಹಕರಿಗೆ ಅನುಕೂಲವಾಗುವ ದಿಸೆಯಲ್ಲಿ ಅಲ್ಲೊಂದು ಶಾಖೆ ಪ್ರಾರಂಭಿಸಬೇಕೆಂಬ ತಮ್ಮ ಬಹು ದಿನಗಳ ಕನಸು ಶೀಘ್ರ ಈಡೇರಲಿದೆ ಎಂದು ಅವರು ತಿಳಿಸಿದರು.  

ಸದಸ್ಯರಿಗೆ ಶೇ. 15ರಂತೆ ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಡಳಿ ನಿರ್ಧರಿಸಿತ್ತು. ಆದರೆ,   ಕೋವಿಡ್ 19 ಕಾರಣದಿಂದಾಗಿ ಷೇರುದಾರರಿಗೆ ಲಾಭಾಂಶ ನೀಡದಂತೆ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ತಡೆ ಹಿಡಿದು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದ ಆದೇಶದ ಹಿನ್ನೆಲೆಯಲ್ಲಿ ತಮ್ಮ ಬ್ಯಾಂಕ್ ಮೀಸಲಿಟ್ಟಿದ್ದ 1.53 ಕೋಟಿ ರೂ.ಗಳನ್ನು ರಿಸರ್ವ್ ಫಂಡ್ ಗೆ ವರ್ಗಾಯಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಸದಸ್ಯರ ಆಸಕ್ತಿ – ಸಂತಸ : ಸಹಕಾರಿ ಬ್ಯಾಂಕಿನ ಮಹಾಸಭೆಯು ಇತರೆ ಬ್ಯಾಂಕುಗ ಳಿಗಿಂತ ತಮ್ಮ ಬ್ಯಾಂಕ್ ಗಮನ ಸೆಳೆದಿದೆ. ಪ್ರತಿ ವರ್ಷ ನಡೆಯುವ ಮಹಾಸಭೆಗೆ ಯಾವುದೇ ಬ್ಯಾಂಕಿನಲ್ಲೂ ಸೇರದಷ್ಟು ಸದಸ್ಯರು ತಮ್ಮ ಬ್ಯಾಂಕಿನ ಮಹಾಸಭೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸುತ್ತಾರೆ. ಈ ಬಾರಿಯ ವರ್ಚುಯಲ್ ಮಹಾ ಸಭೆಯ ಬಗ್ಗೆ ಆಡಳಿತ ಮಂಡಳಿ ಆತಂಕದಲ್ಲಿತ್ತು. ಆದರೆ, ಈ ಸಭೆಯಲ್ಲೂ 3,700ಕ್ಕೂ ಹೆಚ್ಚು ಸದಸ್ಯರು ಹೆಸರು ನೋಂದಾಯಿಸಿರುವುದಲ್ಲದೇ, ಅನೇಕ ಸದಸ್ಯರು ಅದರಲ್ಲೂ ಈ ಬಾರಿ ಗೃಹಿಣಿಯರು ಹಲವಾರು ಪ್ರಶ್ನೆಗಳನ್ನು ಕೇಳುವುದರ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೆ, ತಮ್ಮ ಬ್ಯಾಂಕಿನ ಬಗ್ಗೆ ಸದಸ್ಯರು ಹೊಂದಿರುವ ಪ್ರೀತಿ – ನಂಬಿಕೆ – ವಿಶ್ವಾಸವೇ ಕಾರಣ ಎಂದು ಕೋಗುಂಡಿ ಬಕ್ಕೇಶಪ್ಪ ಸಂತಸ ವ್ಯಕ್ತಪಡಿಸಿದರು.

ಬ್ಯಾಂಕಿನ ಹಿರಿಯ ಸದಸ್ಯರುಗಳಾದ ಮೋತಿ ಸೈಕಲ್ ಮಾರ್ಟ್ ನ ಟಿ.ಶಂಕ್ರಪ್ಪ, ಹಳ್ಳೂರು ಸೋಮಶೇಖರ್, ಕೆ.ಬಿ.ನಾಗರಾಜ್, ಜಂಬಗಿ ರಾಧೇಶ್, ಎಂ.ಸಿ. ವಿಜಯಕುಮಾರ್ ಮತ್ತಿತರರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಅಧ್ಯಕ್ಷ ಬಕ್ಕೇಶಪ್ಪ ಸಮರ್ಪಕವಾಗಿ ಉತ್ತರಿಸಿದರು.

8.95 ಕೋಟಿ ರೂ. ಲಾಭ : 2020, ಮಾರ್ಚ್ ಅಂತ್ಯಕ್ಕೆ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 8.95 ಕೋಟಿ ರೂ. ಲಾಭ ಗಳಿಸಿದ್ದು, ಆದಾಯ ತೆರಿಗೆ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ 4.43 ಕೋಟಿ ರೂ. ನಿವ್ವಳ ಲಾಭ ಗಳಿಸುವುದರ ಮೂಲಕ ಜಿಲ್ಲೆಯಲ್ಲೇ ಸಹಕಾರಿ ಬ್ಯಾಂಕೊಂದು ಅತೀ ಹೆಚ್ಚಿನ ಲಾಭ ಗಳಿಸಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಸಂಭ್ರಮಿಸಿದರು.

10.70 ಕೋಟಿ ರೂ. ಷೇರು ಬಂಡವಾಳ, 47.65 ಕೋಟಿ ರೂ. ಕಾಯ್ದಿಟ್ಟ ನಿಧಿ ಮತ್ತು ಇತರೆ ನಿಧಿಗಳಾಗಿದ್ದು, 376.78 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಸದಸ್ಯರ ವಿವಿಧ ಉದ್ದೇಶಗಳಿಗನುಗು ಣವಾಗಿ 260.24 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿದ್ದು, 444.25 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಅವರು ಬ್ಯಾಂಕಿನ ಪ್ರಗತಿಯ ಪಕ್ಷಿ ನೋಟವನ್ನು ಸಂಕ್ಷಿಪ್ತ ಅಂಕಿ-ಅಂಶಗಳೊಂದಿಗೆ ವಿವರಿಸಿದರು.

ಕೋವಿಡ್ ನಲ್ಲೂ ಠೇವಣಿ ಸಂಗ್ರಹ : 7 – 8 ತಿಂಗಳುಗಳ ಕಾಲ ತಲ್ಲಣಗೊಳಿಸಿದ್ದ ಕೋವಿಡ್ 19 ಸಂದರ್ಭದಲ್ಲೂ 48 ಕೋಟಿ ರೂ.ಗಳಿಗೂ ಹೆಚ್ಚು ಠೇವಣಿ ಸಂಗ್ರಹವಾಗಿದ್ದು, ಇದು ಬ್ಯಾಂಕಿನ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆ ಯನ್ನು ಪ್ರತಿಬಿಂಬಿಸುತ್ತದೆ ಎಂದು ಹಿರಿಯ ನಿರ್ದೇ ಶಕ ಬಿ.ಸಿ. ಉಮಾಪತಿ ಹರ್ಷ ವ್ಯಕ್ತಪಡಿಸಿದರು.

ಕೋವಿಡ್ 19 ಅವಧಿಯಲ್ಲಿ ವ್ಯಾಪಾರಸ್ಥರಿ ಗಾದ ವ್ಯವಹಾರದ ತೊಂದರೆಯನ್ನು ಗಮನದ ಲ್ಲಿಟ್ಟುಕೊಂಡು ಸಾಲಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅವರನ್ನು ಬ್ಯಾಂಕಿನಿಂದ ಪ್ರೋತ್ಸಾಹಿಸುವ ಸದುದ್ಧೇಶದಿಂದ 6 ತಿಂಗಳು ಗಳ ಕಾಲ ಬಡ್ಡಿಯಲ್ಲಿ ಶೇ. 1ರಂತೆ ವಿಶೇಷ ರಿಯಾಯಿತಿ ನೀಡಲಾಗಿತ್ತು. ಇದರಿಂದಾಗಿ ಬ್ಯಾಂಕಿಗೆ ಲಾಭದಲ್ಲಿ ಪ್ರತಿ ತಿಂಗಳು ಸುಮಾರು 20 ಲಕ್ಷ ರೂ.ಗಳಷ್ಟು   ಕಡಿಮೆಯಾಯಿತಾದರೂ, ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲಗಾರರನ್ನು ಕೈಹಿಡಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕಾರಣವಾಗಿದೆ ಎಂದು ಉಮಾಪತಿ ಅವರು ಪ್ರತಿಪಾದಿಸಿದರು.

ಕೃತಜ್ಞತೆ : ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಬ್ಯಾಂಕ್ ಪ್ರಗತಿದಾಯಕವಾಗಿ ಮುನ್ನಡೆೆಯಲು ಬ್ಯಾಂಕಿನ ಸದಸ್ಯರು ಮತ್ತು ಠೇವಣಿದಾರರ ಪ್ರೋತ್ಸಾಹ ಹಾಗೂ ಸಹಕಾರ, ಸಿಬ್ಬಂದಿ ವರ್ಗದವರ ಪರಿಶ್ರಮ, ಆಡಳಿತ ಮಂಡಳಿಯ ಇಚ್ಛಾಶಕ್ತಿ ಕಾರಣವಾಗಿದೆ ಎಂದು ತಿಳಿಸಿದ ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ ಅವರು, ಬ್ಯಾಂಕಿನ ಅಭಿವೃದ್ಧಿಗೆ ಸಹಕರಿ ಸುತ್ತಿರುವ ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಿರ್ಣಯಗಳನ್ನು ನಿರ್ದೇಶಕ ಟಿ.ಎಸ್. ಜಯರುದ್ರೇಶ್ ಓದಿ ದೃಢೀಕರಿಸಿದರು. ಕಾರ್ಯನಿರ್ವಾಹಕ ಮಂಡಳಿ ತಯಾರಿಸಿದ ವಾರ್ಷಿಕ ವರದಿಯನ್ನು ವೃತ್ತಿಪರ ನಿರ್ದೇಶಕ ಮುಂಡಾಸ್ ವೀರೇಂದ್ರ ಮಂಡಿಸಿದರು. 

ಆಡಳಿತ ಮಂಡಳಿಯು ನೂತನ ಸಾಲಿಗೆ ರೂಪಿಸಿರುವ ಕಾರ್ಯ ಚಟುವಟಿಕೆಗಳನ್ನು ನಿರ್ದೇಶಕ ಅಜ್ಜಂಪುರ ಶೆಟ್ರು ವಿಜಯಕುಮಾರ್ ಸಭೆಯ ಗಮನಕ್ಕೆ ತಂದು ಸದಸ್ಯರ ಅನುಮೋದನೆ ಪಡೆದರು. ಬ್ಯಾಂಕಿನ ಉಪನಿಯಮಗಳ ತಿದ್ದುಪಡಿಯ ವಿಷಯವನ್ನು ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಣವಿ ಮಂಡಿಸಿದರು. 

ನಿರ್ದೇಶಕರುಗಳಾದ ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟಿ ಶಿವಾನಂದಪ್ಪ, ಎಂ. ಚಂದ್ರಶೇಖರ್, ದೇವರಮನೆ ಶಿವಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ನಲ್ಲೂರು ಎಸ್. ರಾಘವೇಂದ್ರ, ಎಂ. ವಿಕ್ರಂ, ವಿಶೇಷ ಆಹ್ವಾನಿತರುಗಳಾದ ಬೆಳ್ಳೂಡಿ ಮಂಜುನಾಥ್, ಎಂ. ದೊಡ್ಡಪ್ಪ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯ ನಂತರ ಶ್ರೀಮತಿ ಡಿ.ಇ. ಸಿಂಧು ಪ್ರಾರ್ಥಿಸಿದರು. ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಐ. ವಸಂತ ಕುಮಾರಿ, ವೃತ್ತಿಪರ ನಿರ್ದೇಶಕರಾಗಿದ್ದ ಲೆಕ್ಕಾಧಿಕಾರಿ ವಿ. ಲಿಂಗರಾಜ್ ಅವರುಗಳ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅತಿಥಿ ಗಣ್ಯರನ್ನು ಸ್ವಾಗತಿಸಿದ ನಿರ್ದೇಶಕ ಇ.ಎಂ. ಮಂಜುನಾಥ ಅವರು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಕಂಚಿಕೆರೆ ಮಹೇಶ್ ವಂದನೆ ಸಲ್ಲಿಸಿದರು.

ಪ್ರಧಾನ ವ್ಯವಸ್ಥಾಪಕ ಡಿ.ವಿ. ಆರಾಧ್ಯಮಠ, ಉಪ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್ ಅವರುಗಳು ಸಭೆಯ ಉಸ್ತುವಾರಿ ವಹಿಸಿದ್ದರು.

ಆಡಳಿತ ಕಚೇರಿಯ ಸಾಲ ವಿಭಾಗದ ವ್ಯವಸ್ಥಾಪಕ ಆರ್. ಎ. ಪ್ರಸನ್ನ, ಪ್ರಧಾನ ಕಚೇರಿ ವ್ಯವಸ್ಥಾಪಕ ಹೆಚ್.ವಿ. ರುದ್ರೇಶ್, ಚೌಕಿಪೇಟೆ ಶಾಖೆ ವ್ಯವಸ್ಥಾಪಕ ಜಿ.ಕೆ. ವಿಜಯಕುಮಾರ್, ಪಿ.ಜೆ. ಬಡಾವಣೆ ಶಾಖೆ ವ್ಯವಸ್ಥಾಪಕರಾದ ಶ್ರೀಮತಿ ಎಲ್.ಎಸ್. ಗೀತಾ, ನರಸರಾಜ ರಸ್ತೆ ಶಾಖೆ ವ್ಯವಸ್ಥಾಪಕ ಕೆ.ಬಿ.ಸಾನಂದ ಗಣೇಶ್, ಡಿ.ದೇವರಾಜ ಅರಸು ಬಡಾವಣೆ ಶಾಖೆ ವ್ಯವಸ್ಥಾಪಕರಾದ ಶ್ರೀಮತಿ ಎಂ.ಎಂ. ಜಯಶೀಲ, ಹೊನ್ನಾಳಿ ಶಾಖೆ ಪ್ರಭಾರ ವ್ಯವಸ್ಥಾಪಕ ಹೆಚ್. ಕುಮಾರ್, ಆಡಳಿತ ಕಚೇರಿಯ ಡಿಬಿಎ ಬಿ.ಎಸ್. ಪ್ರಶಾಂತ್ ಅವರುಗಳು ಸಭೆಯ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!