ವಿಜಯನಗರ ಜಿಲ್ಲೆ : ಮೊದಲು ಸಮಾಲೋಚಿಸಬೇಕಿತ್ತು

ಹರಪನಹಳ್ಳಿ, ನ.23- ವಿಜಯನಗರ ಜಿಲ್ಲೆ ರಚನೆ ಮಾಡುವುದಕ್ಕೆ ಪೂರ್ವದಲ್ಲಿ ಬುದ್ಧಿಜೀವಿಗಳು, ಹೋರಾಟಗಾರರು, ವಿವಿಧ ಪಕ್ಷಗಳ ಮುಖಂಡರೊಂದಿಗೆ ಅದರ ಸಾಧಕ- ಬಾಧಕಗಳ ಕುರಿತು ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು ಎಂದು ಸಂಡೂರು ಶಾಸಕ ಇ. ತುಕಾರಾಂ ತಮ್ಮ ಅಭಿಪ್ರಾಯ ಪಟ್ಟಿದ್ದಾರೆ.

ಇಂದಿಲ್ಲಿ ನಡೆದ ಸಮತಾ ಗ್ರಾಮೀಣಾಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಜನಸಂಪರ್ಕ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 10 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಮೀಸಲು ಕ್ಷೇತ್ರಗಳಿವೆ. ಅದರಲ್ಲಿ 5 ಎಸ್ಟಿ, 2 ಎಸ್ಸಿ 3 ಸಾಮಾನ್ಯ ಇವೆ. ಇಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯತೆ ನೀಡಿದಂತಾಗುತ್ತದೆ. ಆದರೆ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಕೇವಲ 1 ಸಾಮಾನ್ಯ ಕ್ಷೇತ್ರ ಬಿಟ್ಟರೆ 4 ಎಸ್ಟಿ ಮೀಸಲು ಕ್ಷೇತ್ರಗಳು ಬರುತ್ತವೆ. ಇದರಿಂದಾಗಿ ಸಾಮಾಜಿಕ ನ್ಯಾಯ ಇಲ್ಲದಂತಾಗುತ್ತದೆ. ಅಖಂಡ ಬಳ್ಳಾರಿ ಜಿಲ್ಲೆ ಇದ್ದರೆ ಮಾತ್ರ ಎಲ್ಲಾ ಸಮುದಾಯಕ್ಕೂ ಮನ್ನಣೆ ಸಿಕ್ಕಂತಾಗುತ್ತದೆ. ಹಾಗೇನಾದರೂ ಹೊಸ ಜಿಲ್ಲೆ ರಚನೆ ಮಾಡಬೇಕು ಎಂದಿದ್ದರೆ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ರಚನೆ ಮಾಡಬಹುದಿತ್ತು ಎಂದು ಅವರು ಹೇಳಿದರು. 

ಮಾಜಿ ಸಚಿವ ಎಸ್. ಸಂತೋಷ್‍ ಲಾಡ್  ಮಾತನಾಡಿ,  ವಿಜಯನಗರ ಜಿಲ್ಲೆ ರಚನೆಗೆ ವೈಯಕ್ತಿಕವಾಗಿ ನನ್ನ ಅಭ್ಯಂತರವಿಲ್ಲ. ಭೌಗೋ ಳಿಕವಾಗಿ ಮಧ್ಯದ ಯಾವುದಾದರೂ ಒಂದು ತಾಲ್ಲೂಕನ್ನು ಗುರುತಿಸಿ ಜಿಲ್ಲೆಯನ್ನು ಮಾಡ ಬಹುದಿತ್ತು. ತಾಲ್ಲೂಕು ಜಿಲ್ಲೆಯಾಗುವುದರಿಂದ ಮೂಲಭೂತ ಸೌಕರ್ಯಗಳು ಹೆಚ್ಚಾಗಿ ಬರುವುದರಿಂದ ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ. ತರಾತುರಿಯಲ್ಲಿ ನಿರ್ಧಾರ ತೆಗೆದು ಕೊಳ್ಳುವ ಬದಲಾಗಿ ಎಲ್ಲರ  ಅಭಿಪ್ರಾಯಗ ಳನ್ನು ಪಡೆದು ಜಿಲ್ಲೆ ರಚನೆಯಿಂದಾಗುವ ಸಾಧಕ ಬಾಧಕಗಳನ್ನು ತಿಳಿಯಬೇಕಿತ್ತು ಎಂದರು.

ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ನೀಲಗುಂದ  ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್,  ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್,  ಜಿಲ್ಲಾ ಬಿಜೆಪಿ ಮುಖಂಡ ಯಶವಂತರಾವ್, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ವೀರಣ್ಣ,  ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌, ಕೆಪಿಸಿಸಿ ಪ್ಯಾನಲಿಸ್ಟ್ ಎಂ.ಪಿ. ವೀಣಾ ಮಹಂತೇಶ್ ಚರಂತಿಮಠ್, ಎಂ.ಟಿ. ಸುಭಾಷ್‍ಚಂದ್ರ, ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್‍ ಅಧ್ಯಕ್ಷೆ ಆಶಾಲತಾ,  ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ಟಿ. ವೆಂಕಟೇಶ್, ಉದ್ದಾರ ಗಣೇಶ್, ತಾ.ಪಂ.ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ರಘು ದೊಡ್ಡಮನಿ, ಮುದಗಲ್ ಗುರುನಾಥ,  ಮಟ್ಟಿ ಪ್ರಕಾಶ, ಉತ್ತಮ್‌ಚಂದ್ ಜೈನ್,  ಭಜನಾ ನಾಯ್ಕ, ಚಿಕ್ಕೇರಿ ಬಸಪ್ಪ, ರಾಯ ದುರ್ಗದ ವಾಗೀಶ್, ಇರ್ಫಾನ್ ಮುದುಗಲ್, ಎಲ್. ಮಂಜ್ಯಾನಾಯ್ಕ, ಪಿ. ಶಿವಕುಮಾರ್ ನಾಯ್ಕ, ಶ್ರೀಕಾಂತ್ ಯಾದವ್, ಗುಜ್ಜಲ ರಘು, ಕಾಶಿನಾಥ, ಪುಷ್ಪಾ ದಿವಾಕರ, ಕಂಚಿಕೇರಿ ಜಯಲಕ್ಷ್ಮಿ, ಮೋತಿನಾಯ್ಕ, ವಿಜಯ್‍ ದಿವಾಕರ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

error: Content is protected !!