ಲೆಕ್ಕಾಧಿಕಾರಿ ವರ್ಗಾವಣೆಗೆ ಸದಸ್ಯರ ಪಟ್ಟು

ಜಗಳೂರು ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ತಾಲ್ಲೂಕಿನಲ್ಲಿ ಈವರೆಗೂ 18 ಜನ ಮೃತಪಟ್ಟಿದ್ದಾರೆ. 40 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 18,000 ರಾಪಿಡ್ ಟೆಸ್ಟ್ ಮಾಡಲಾಗಿದೆ. 23,000 ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.

– ಡಾ. ನಾಗರಾಜ್, ತಾಲ್ಲೂಕು ವೈದ್ಯಾಧಿಕಾರಿ

ಜಗಳೂರು, ನ.18- ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ, ಸದಸ್ಯರ ಸಲಹೆ, ಸೂಚನೆಗಳನ್ನು ಪಾಲಿಸದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವ ತಾಲ್ಲೂಕು ಪಂಚಾಯತ್ ಲೆಕ್ಕಾಧಿಕಾರಿಯನ್ನು  ವರ್ಗಾವಣೆ ಮಾಡಲು ಜಿಲ್ಲಾ ಪಂಚಾಯತ್‌ಗೆ ವರದಿ ಮಾಡುವಂತೆ ಇಂದು ನಡೆದ   ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. 

15ನೇ ಹಣಕಾಸು ಅನುದಾನ, ಅನಿರ್ಬಂ ಧಿತ ಅನುದಾನ, ಎಸ್. ಇ. ಪಿ., ಟಿಎಸ್ಪಿ ಸೇರಿದಂತೆ ವಿವಿಧ ಯೋಜನೆಗಳ ಅನುದಾನದ ಕ್ರಿಯಾ ಯೋಜನೆಗಳ ಬಗ್ಗೆ ಲೆಕ್ಕಾಧಿಕಾರಿಗೆ ಸರಿಯಾದ ಮಾಹಿತಿ ಇಲ್ಲ. ಸದಸ್ಯರು ಕೇಳುವ ಮಾಹಿತಿಯನ್ನು ನೀಡುವುದಿಲ್ಲ. ಇದರಿಂದಾಗಿ ಮಾರ್ಚ್ ಒಳಗೆ ಅನುದಾನ ಸಂಪೂರ್ಣವಾಗಿ ವೆಚ್ಚ ಮಾಡುವುದು ಅಸಂಭವವೇ ಸರಿ. ತಕ್ಷಣ ಲೆಕ್ಕಾಧಿಕಾರಿಯನ್ನು  ವರ್ಗಾಯಿಸಿ ಬೇರೆಯವ ರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ವ ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ ಅವರನ್ನು ಆಗ್ರಹಿಸಿದರು.

ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವವರೆಗೂ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸದಸ್ಯರಾದ ತಿಮ್ಮೇಶ್, ಶಂಕರ್‌ನಾಯ್ಕ, ಟಿ. ಬಸವರಾಜ್, ತಿಪ್ಪೇಸ್ವಾಮಿ ಸೇರಿ ದಂತೆ ಬಹುತೇಕ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಸಮಜಾಯಿಷಿ ನೀಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯಕ್, ಲೆಕ್ಕಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ ಸದಸ್ಯರು ಸಮಾಧಾನ ಗೊಳ್ಳಲಿಲ್ಲ. 

15 ಹಣಕಾಸು ಯೋಜನೆ, ಅನಿರ್ಬಂಧಿತ ಅನುದಾನ ಯೋಜನೆ ತಯಾರಿಸುವಲ್ಲಿ ವಿಳಂಬವಾಗಿರುವುದು ಶೀಘ್ರವೇ ಸದಸ್ಯರ ಗಮನಕ್ಕೆ ತರಲಾಗುವುದು ಮತ್ತು ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ ಫೆಬ್ರವರಿ ಅಂತ್ಯದೊಳಗೆ ಎಲ್ಲ ಯೋಜನೆಯ ಕ್ರಿಯಾ ಯೋಜನೆ ಅನುದಾನವನ್ನು ವೆಚ್ಚ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮತ್ತು ಲೆಕ್ಕಾಧಿ ಕಾರಿಯ ಕಾರ್ಯವೈಖರಿ ಬಗ್ಗೆ ಪ್ರತ್ಯೇಕವಾಗಿ ಸದಸ್ಯರೊಂದಿಗೆ ಸಭೆ ಕರೆದು ಚರ್ಚಿಸಲಾ ಗುವುದು. ಸಾಮಾನ್ಯ ಸಭೆ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.

ನಂತರ ನಡೆದ ಸಾಮಾನ್ಯ ಸಭೆಯ ಪ್ರಗತಿ ಪರಿಶೀಲನೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಪ್ರಗತಿ ವರದಿ ಮಂಡಿಸಿದರು. ಪಂಚಾಯತ್ ರಾಜ್ ಇಲಾಖೆ ಸಹಾಯಕ ಇಂಜಿನಿಯರ್‌ ಶಿವಕುಮಾರ್ ಪ್ರಗತಿ ವರದಿ ನೀಡಿದಾಗ ಮೂಡಲ ಮಾಚಿಕೆರೆ ಗ್ರಾಮದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ ಕಳಪೆಯಾಗಿದ್ದು, ಪೈಪ್‌ಲೈನ್ ಒಡೆದು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ  ಪಿಡಿಓಗೆ ಕೇಳಿದರೆ  ಇಂಜಿನಿಯರ್ ಮೇಲೆ ಹೇಳುತ್ತಾರೆ. ತಕ್ಷಣ  ಸರಿಪಡಿಸಿ ಎಂದು ಸದಸ್ಯರು ಒತ್ತಾಯಿಸಿದರು.

ಇಂಜಿನಿಯರ್ ನಂದೀಶ್ ಅವರು ಕಚೇರಿಗೂ ಸರಿಯಾಗಿ ಬರದೆ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದೇ ಇರುವ ಬಗ್ಗೆ ಜನರಿಂದ ವ್ಯಾಪಕ ದೂರುಗಳು ಬಂದರೂ ಸಹ ಕ್ರಮ ಏಕೆ ಕೈಗೊಂಡಿಲ್ಲ ಎಂದು ಸದಸ್ಯರಾದ  ತಿಮ್ಮೇಶ್, ಶಂಕರ್ ನಾಯಕ್, ಬಸವರಾಜ್ ಪ್ರಶ್ನಿಸಿದರು. 

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.  ಮಹೇಶ್ ಮಾತನಾಡಿ, ಪದವಿ ಕಾಲೇಜಿನ ಅಂತಿಮ ವರ್ಷದ ತರಗತಿಗಳು ಆರಂಭವಾಗಿವೆ. ಹಾಸ್ಟೆಲ್ ಸಿಬ್ಬಂದಿಗಳನ್ನು ಈಗಾಗಲೇ ಕೊರೊನಾ ಟೆಸ್ಟ್‌ಗೆ ಒಳಪಡಿಸ ಲಾಗಿದೆ. ಇದುವರೆಗೆ ಇನ್ನೂ ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಆದರ್ಶ ಗ್ರಾಮ ಯೋಜನೆ ಅಡಿ ಗ್ರಾಮಗಳಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳಲು ತಲಾ 40 ಲಕ್ಷ ರೂ. ಅನುದಾನ ಬಂದಿದ್ದು ಯೋಜನೆ ತಯಾರಿಸಲಾಗಿದೆ ಎಂದರು.

ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ ಮಾತನಾಡಿದರು.

 ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಹೇಮೋಜಿ ನಾಯಕ್, ಬೆಸ್ಕಾಂ ಎಇಇ ಪ್ರವೀಣ್, ಲೋಕೋಪ ಯೋಗಿ ಇಲಾಖೆ ಎಇಇ  ರುದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ವೇತಾ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳು ವರದಿ ಸಲ್ಲಿಸಿದರು. ತಾ.ಪಂ. ಅಧ್ಯಕ್ಷೆ ಮಂಜುಳಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!