ಡೊನೇಷನ್ ಹಾವಳಿಗೆ ಕಡಿವಾಣ ಹಾಕಲು ಒತ್ತಾಯ

ಹರಪನಹಳ್ಳಿ, ಜು. 31 – ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ  ಅಖಿಲ ಭಾರತ ವಿದ್ಯಾರ್ಥಿ ಪೆಡರೇಷನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ  ಉಪವಿಭಾಗಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಎಐಎಸ್ ಎಫ್ ರಾಜ್ಯ ಕಾರ್ಯದರ್ಶಿ ಎಚ್. ರಮೇಶ್ ನಾಯ್ಕ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ, ಅಮಾಯಕ ಬಡ ವಿದ್ಯಾರ್ಥಿಗಳಿಂದ  ಡೊನೇಷನ್‍
ರೂಪದಲ್ಲಿ ಹಣ ಪಡೆಯುತ್ತಿರುವುದು. ಖಂಡನೀಯ. ಪ್ರತಿ ವರ್ಷ ಡೊನೇಷನ್‍ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ  ಸಂಘಟನೆ ಪ್ರತಿಭಟನೆ ನಡೆಸುತ್ತಾ
ಬಂದಿದೆ. ಆದರೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ಬಡ ವಿದ್ಯಾರ್ಥಿಗಳು ಈ ಡೊನೇಷನ್‍ ಹಾವಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಈ ಅನ್ಯಾಯವನ್ನು ತಡೆಗಟ್ಟಬೇಕು. ಅಲ್ಲದೇ ಸರ್ಕಾರಿ ಆದೇಶದ ಅನುಸಾರ
ವಿದ್ಯಾರ್ಥಿಗಳು ಎಷ್ಟು ಶುಲ್ಕವನ್ನು ಭರಿಸ ಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದು  ಅವರು ಒತ್ತಾಯಿಸಿದ್ದಾರೆ. 

ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ ಮಾತನಾಡಿ, ಕೋವಿಡ್-19 ರ ಪರಿಸ್ಥಿತಿಯಲ್ಲಿಯೂ  ಸಹ ಡೊನೇಷನ್ ಹಾವಳಿ ನಿಲ್ಲುತ್ತಿಲ್ಲ,  ಖಾಸಗಿ ಸಂಸ್ಥೆಗಳ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು (ಸದಸ್ಯರು) ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಂದ ಡೊನೇಷನ್‍ ರೂಪದಲ್ಲಿ ಹಣ ವಸೂಲಿ ಮಾಡುತ್ತಿ ರುವುದು ಶೈಕ್ಷಣಿಕ ಶೋಷಣೆಯಾಗಿದೆ  ಹಾಗೂ ಶಿಕ್ಷಣವನ್ನು ವ್ಯಾಪಾರದ ವಸ್ತುವಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತದೆ ಎಂದವರು ಹೇಳಿದ್ದಾರೆ. 

ದೇವರಾಜನಾಯ್ಕ, ಸಲ್ಮಾನ್, ಅಜೀಜ್, ಮಹಮದ್ ಸಾಧಿಕ್ ಹಾಗೂ  ಇತರರು ಪಾಲ್ಗೊಂಡಿದ್ದರು.

error: Content is protected !!