ಹರಪನಹಳ್ಳಿ,ನ.2- ಶಿರಾದಲ್ಲಿ ನಡೆದ ಮಾದಿಗ ಸಮುದಾಯದ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಅವರು ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಬದ್ದ ಎಂದು ನೀಡಿದ ಹೇಳಿಕೆ ಖಂಡಿಸಿ, ಗೋರ್ ಸೇನಾ ಕರ್ನಾಟಕ ತಾಲ್ಲೂಕು ಘಟಕ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಸತೀಶನಾಯ್ಕ್ ಮಾತನಾಡಿ, ಕಟೀಲು ಅವರು ಈ ರೀತಿ ಬಾಲಿಶತನದ ಸುಳ್ಳು ಹೇಳಿಕೆ ನೀಡುವ ಮೂಲಕ ಲಂಬಾಣಿ, ಕೊರಚ, ಕೊರಮ, ಬೋವಿ, ಬುಡುಗ ಜಂಗಮ, ಶಿಳ್ಳಿ ಕ್ಯಾತರ, ಸಿಂದೋಳಿ, ಗೋಸಂಗಿ, ದೊಂಬಿದಾಸ ಹಾಗೂ ಅಲೆಮಾರಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎಂದರು.
ಮಾದಿಗ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಸದಾಶಿವ ಆಯೋಗದ ವರದಿಯನ್ನು ಮುಂದಿಟ್ಟು ಕೊಂಡು ರಾಜಕೀಯ ಬೇಳೆ ಬೇಯಿಸಲು ಮುಂದಾಗಿರುವ ಕಟೀಲು ಅವರು ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ರಾಜಿನಾಮೆ ನೀಡಬೇಕು ಮತ್ತು ಬಹಿರಂಗ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾಜೀವ್ ಡಿ. ನಾಯ್ಕ್, ಕಾರ್ಯದರ್ಶಿ ಎಲ್.ಎಸ್.ಮಂಜ್ಯಾನಾಯ್ಕ್, ವಾಲ್ಯಾನಾಯ್ಕ್ ಹಾಲೇಶ್ ದೊಡ್ಡಮನಿ, ಕುಮಾರ್, ಸೇವಾನಾಯ್ಕ್, ಸುಂದರೆಶ್, ದುರುಗ್ಯಾ, ಪ್ರವೀಣ್, ಅಶೋಕ್, ಗಿರೀಶ್, ಶಂಕರ್, ಶಿವು, ಚೆನ್ನ, ಕುಮಾರ್ ನಾಯ್ಕ್, ಮತ್ತು ಇತರರು ಇದ್ದರು.