ಆಯುಕ್ತರಿಂದ ಸರ್ಕಾರಿ ಆದೇಶ ಉಲ್ಲಂಘನೆ

ಹರಿಹರ ಆಶ್ರಯ ಕಾಲೋನಿ ಮುಖಂಡರ ಆಕ್ರೋಶ

ಹರಿಹರ, ಜು. 28 – ವಸತಿ ಯೋಜನೆಗೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತರಾದ ಎಸ್.ಲಕ್ಷ್ಮಿ ಅವರು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಇಲ್ಲಿನ ಆಶ್ರಯ ಕಾಲೋನಿ ಮುಖಂಡರು ಆರೋಪಿಸಿದ್ದಾರೆ.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣ ದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆಶ್ರಯ ಕಾಲೋನಿ ನಿವಾಸಿ, ಕಾಂಗ್ರೆಸ್ ಮುಖಂಡ ಟಿ.ಹನುಮಂತಪ್ಪ ಮಾತನಾಡಿ, ಆಶ್ರಯ ಕಾಲೋನಿಯ ನಿವಾಸಿಗಳಿಗೆ ತಮ್ಮ ಮನೆಗಳನ್ನು ರಿಜಿಸ್ಟರ್ ಮಾಡಿಸಿಕೊಳ್ಳುವಲ್ಲಿ ಅನಾವಶ್ಯಕವಾಗಿ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದರು.

ಡಿ.ಎಸ್.ಎಸ್ ಹಾಗೂ ಬಿ.ಎಸ್.ಪಿ ಮುಖಂಡ ಡಿ.ಹನುಮಂತಪ್ಪ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಗಳಾಗಿದ್ದ ಸಂದರ್ಭದಲ್ಲಿ ಆಶ್ರಯ ಯೋಜನೆಯ ಫಲಾನುಭ ವಿಗಳ ಮನೆಗಳ ಸಾಲ ಮತ್ತು ಬಡ್ಡಿಯನ್ನು  ಮನ್ನಾ ಮಾಡಿ, ಈ ವಿಷಯದ ಬಗ್ಗೆ ಸರ್ಕಾರದ ಸುತ್ತೋಲೆಯನ್ನು ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗಳು ರಾಜೀವ್ ಗಾಂಧಿ ಗ್ರಾಮೀಣ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ, ಜಿಲ್ಲಾಧಿಕಾ ರಿಗಳಿಗೆ ಮತ್ತು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ರವಾನೆ ಮಾಡಿದ್ದಾರೆ. ಆದರೂ ಸಹ ಪೌರಾಯುಕ್ತರು ಇದ್ಯಾವುದೇ ಆದೇಶಗ ಳಿಗೂ ಮನ್ನಣೆ ನೀಡದೆ ತಮ್ಮದೇ ಆದ ರೀತಿಯಲ್ಲಿ ವರ್ತಿಸುತ್ತಾ ಬಡ ನಿವಾಸಿಗಳಿಂದ ಸುಮಾರು 60ರಿಂದ 70 ಸಾವಿರ ಹಣವನ್ನು ನಗರಸಭೆಗೆ ತುಂಬಿಸಿಕೊಂಡು ಹಕ್ಕುಪತ್ರ ನೀಡುತ್ತಿ ರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಅಲ್ಲದೆ ಕೆಲವು ಮೂಲ ಫಲಾನುಭವಿಗಳು ಅಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಈಗ ಸದ್ಯ ವಾಸವಾಗಿರುವ ನಿವಾಸಿಗಳಿಗೆ ಸರ್ಕಾರದ ಸುತ್ತೋಲೆಯಂತೆ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಆಶ್ರಯ ಸಮಿತಿಯಲ್ಲಿ ಒಪ್ಪಿಗೆ ಪಡೆದು ಅಲ್ಲಿ ವಾಸಿಸುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ಅವರು ಒತ್ತಾಯಿಸಿದರು. 

ಇದೇ ವಿಚಾರವಾಗಿ ಶಾಸಕರೂ ಆದ ಆಶ್ರಯ ಸಮಿತಿಯ ಅಧ್ಯಕ್ಷ ಎಸ್. ರಾಮಪ್ಪ ನವರೂ ಸಹ ಪೌರಾಯುಕ್ತರೊಂದಿಗೆ ಮಾತನಾಡಿ ಪತ್ರವನ್ನು ಸಹ ನೀಡಿದ್ದಾರೆ. ಅವರ ಮಾತಿಗೂ ಸಹ ಬೆಲೆ ಕೊಡದಿರುವ ಪೌರಾಯುಕ್ತರ ವರ್ತನೆ ಬೇಸರ ತಂದಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಶ್ರಯ ಕಾಲೋ ನಿಯ ನಿವಾಸಿಗಳಾದ ಕೆ.ರಾಚಯ್ಯ, ಮಾರುತಿ, ಶಾಮಸುಂದರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!