ಜಗಳೂರಿನಲ್ಲಿ ಸಿವಿಲ್ ನ್ಯಾಯಾಲಯ ಕಾಯಂ : ಬೇಡಿಕೆ ಈಡೇರಿಕೆಗೆ ಶೀಘ್ರ ಕ್ರಮ

ಹೈಕೋರ್ಟ್ ನ್ಯಾ|| ನಟರಾಜನ್‌

ಜಗಳೂರು, ನ.16- ಜಗಳೂರಿನಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವನ್ನು ಕಾಯಂಗೊಳಿಸುವ ಬೇಡಿಕೆಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನಟರಾಜನ್ ತಿಳಿಸಿದ್ದಾರೆ.

ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆಗಿರುವ ನಟರಾಜನ್ ಅವರು, ತಾಲ್ಲೂಕು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ ವಾರಕ್ಕೆ ಎರಡು ದಿನ  ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಾರ್ಯನಿ ರ್ವಹಿಸುತ್ತಿದ್ದು, ಕಾಯಂಗೊಳಿಸುವಂತೆ ವಕೀ ಲರ ಸಂಘ ಬೇಡಿಕೆ ಇಟ್ಟಿದೆ. ಬೆಂಗಳೂರಿಗೆ ತೆರಳಿದ ನಂತರ ನಾಳೆಯೇ ಈ ಬಗ್ಗೆ ಸಭೆ ಕರೆದು ಕಾಯಂ ನ್ಯಾಯಾಲಯ ಸ್ಥಾಪನೆ ಬಗ್ಗೆ ಅಗತ್ಯ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳ ಲಾಗುವುದು. ಹಾಗೆಯೇ ಸಹಾಯಕ ಸರ್ಕಾರಿ ವಕೀಲರೂ ಸಹ ಕಾಯಂ ಆಗಿ ಇಲ್ಲಿ ಸೇವೆ ಸಲ್ಲಿಸುವ  ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಕೊರೊನಾ ಅವಧಿಯಲ್ಲೂ ದೇಶದಲ್ಲೇ ರಾಜ್ಯದ ನ್ಯಾಯಾಲಯಗಳು ಮಾತ್ರ ಕಾರ್ಯ ನಿರ್ವಹಿಸಿವೆ. ಬಡವರಿಗೆ ನ್ಯಾಯ ಪಡೆಯಲು ತೊಂದರೆಯಾಗದಂತೆ ಕಲಾಪಗಳನ್ನು ನಾವು ನಡೆಸುತ್ತಿದ್ದೇವೆ ಎಂದು ನ್ಯಾ. ನಟರಾಜನ್ ಹೇಳಿದರು.

ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಕಾರ್ಯ ವೈಖರಿ  ಹಾಗೂ ಸಮಾರಂಭದ ಬಗ್ಗೆ ಈ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಪ್ರಭು ಬಡಿಗೇರ್, ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ, ಎಪಿಪಿ ರೂಪ ಮತ್ತು ವಕೀಲರ ಸಂಘದ ಸದಸ್ಯರು ಇದ್ದರು.

error: Content is protected !!