ವಿಷ ಕುಡಿದು ಬಿದ್ದಿದ್ದ ಯುವಕ ; ಚಿಕಿತ್ಸೆ ಕೊಡಿಸಿದ ಶಾಸಕ ರಾಮಪ್ಪ

ಹರಿಹರ, ಆ.10- ವಿಷ ಕುಡಿದಿದ್ದ ವ್ಯಕ್ತಿಯನ್ನು ಶಾಸಕ ಎಸ್‌. ರಾಮಪ್ಪ, ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊಂಡಜ್ಜಿ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಂಡು ಹರಿಹರಕ್ಕೆ ಆಗಮಿಸುತ್ತಿದ್ದ ವೇಳೆ ಕರಹಳ್ಳಿ ಕ್ಯಾಂಪ್‌ ಬಳಿ ಜಮೀನಿನಲ್ಲಿ ಯುವಕನೊಬ್ಬ ಬಿದ್ದು ಒದ್ದಾಡುತ್ತಿದ್ದ ಎನ್ನಲಾಗಿದೆ. ಹೆದ್ದಾರಿ ಸಮೀಪದಲ್ಲೇ ಇದನ್ನು ಗಮನಿಸಿದ ಶಾಸಕರು, ಕಾರನ್ನು ನಿಲ್ಲಿಸಿ ಹೋಗಿ ವಿಚಾರಿಸಿದಾಗ ವಿಷ ಕುಡಿದಿದ್ದಾನೆ ಎಂಬ ವಿಷಯ ತಿಳಿಯಿತು. ಆತನನ್ನು ತಮ್ಮ ಕಾರಿನಲ್ಲೇ ಕರೆದುಕೊಂಡು ಬಂದು ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಿದರು. ಈ ಯುವಕ ದೀಟೂರು ಗ್ರಾಮದ ಬಸವರಾಜ (30) ಎನ್ನಲಾಗಿದೆ. ವಿಷ ಕುಡಿಯಲು ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಸಮಯಪ್ರಜ್ಞೆ ಮೆರೆದ ಶಾಸಕರ ಈ ಉತ್ತಮ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯುವಕನನ್ನು ಆಸ್ಪತ್ರೆಗೆ ಕರೆತರಲು ಶಾಸಕರ ಜೊತೆ ಇದ್ದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಶಾಸಕರ ಆಪ್ತ ಸಹಾಯಕ ವಿಜಯ ಮಹಾಂತೇಶ್‌ ಹಾಗೂ ಕಾರು ಚಾಲಕ ಕೂಡಾ ನೆರವಾಗಿದ್ದಾರೆ.

error: Content is protected !!