ಹೊನ್ನಾಳಿ ಕೃತಜ್ಞತಾ ಯಾತ್ರೆಗೆ ಜಯ ಮೃತ್ಯುಂಜಯ ಶ್ರೀ

ಹೊನ್ನಾಳಿ, ಮಾ.24- ಕೃತಜ್ಞತಾ ಯಾತ್ರೆ ನಿಮಿತ್ತ ಇದೇ ಮಾರ್ಚ್ 27 ರಂದು ಸಂಜೆ 4 ಗಂಟೆಗೆ ಕೂಡಲ ಸಂಗಮದ ಶ್ರೀ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ಹೊನ್ನಾಳಿಗೆ ಆಗಮಿಸಲಿದ್ದಾರೆ.

ಈ ಸಂಬಂಧ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಹೊನ್ನಾಳಿ ತಾಲ್ಲೂಕು ಘಟಕ, ನ್ಯಾಮತಿ ತಾಲ್ಲೂಕು ಘಟಕ ಹಾಗೂ ಪಟ್ಟಣದ ಯುವ ಘಟಕದ ಪದಾಧಿಕಾರಿಗಳು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಮಾತನಾಡಿದರು.

ಜಿಲ್ಲೆಯ ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳ ಮೂಲಕ ಬೆಂಗಳೂರಿಗೆ ಪಾದಯಾತ್ರೆ ತೆರಳುವುದರಿಂದ ಹೊನ್ನಾಳಿಯಲ್ಲಿ ಆಚರಿಸುತ್ತಿರುವ ಕೃತಜ್ಞತಾ ಸಭೆ ಹೆಚ್ಚು ಮಹತ್ವ ಪಡೆದಿದ್ದು, ಸಮಾಜ ಬಾಂಧವರಲ್ಲಿ ಆಸಕ್ತಿ ಮೂಡಿಸಿದೆ. ಹೊನ್ನಾಳಿ ಸಭೆಯ ನಂತರ ಸ್ವಾಮೀಜಿಗಳು ಹರಿಹರ ಮಾರ್ಗವಾಗಿ ದಾವಣಗೆರೆಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ಸ್ವಾಮೀಜಿಗಳು ಚಿತ್ರದುರ್ಗ ಮಾರ್ಗವಾಗಿ ಹೆಬ್ಬಾಳ ಮಠ, ಚನ್ನಗಿರಿಯ ಕಾಶೀಪುರ, ಕಾರಿಗನೂರು ಕ್ರಾಸ್ ಮೂಲಕ ಸಂಜೆ 4 ಗಂಟೆಗೆ ಸಭೆಗೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಸಭೆಯ ಆಯೋಜಕರು ತಿಳಿಸಿದರು. ಸಮಾಜದ ಪ್ರಮುಖರಾದ ನ್ಯಾಮತಿ ಪಂಚಪ್ಪ, ಪಟ್ಟಣ ಶೆಟ್ಟಿ ಪರಮೇಶ್, ಬೆನಕನಹಳ್ಳಿ ವೀರಣ್ಣ, ರೈತ ಮುಖಂಡ ಹಿರೇಮಠ ಬಸಣ್ಣ, ಹೊಳೆ ಹರಳಹಳ್ಳಿ ಬಸವರಾಜಪ್ಪ, ಹೋಟೆಲ್ ಗಿರೀಶ್, ಪೇಟೆ ಪ್ರಶಾಂತ್‌, ಕಾಯಿ ಬಸಣ್ಣ, ಗಂಗಣ್ಣ, ಹಾಲೇಶ್, ಪಲ್ಲವಿ ರಾಜು, ಮೃತ್ಯುಂಜಯ ಪಾಟೀಲ್, ಶಿಕ್ಷಕ ಗಿರೀಶ್, ಕೆ.ವಿ. ಪ್ರಸನ್ನ ಇನ್ನಿತರರಿದ್ದರು.

error: Content is protected !!