ನ್ಯಾಮತಿ : ರಾಮೇಶ್ವರಕ್ಕೆ ಶಾಸಕ ರೇಣುಕಾಚಾರ್ಯ ಮತ್ತೆ ಭೇಟಿ

ನ್ಯಾಮತಿ, ಮೇ 9- ಬೈದರೂ ಪರವಾಗಿಲ್ಲ ಮೊದಲು ಗ್ರಾಮಸ್ಥರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ರಾಮೇಶ್ವರ ಗ್ರಾಮಸ್ಥರಲ್ಲಿ ಮತ್ತೊಮ್ಮೆ ಮನವಿ ಮಾಡಿದರು.

ನಾಲ್ಕನೇ ದಿನವಾದ ಭಾನುವಾರ ಸಹ ಗ್ರಾಮಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು, ಗ್ರಾಮಸ್ಥರಲ್ಲಿ ಮನವಿ ಮಾಡಿ, ನಿಮ್ಮ ಆರೋಗ್ಯವನ್ನು ಕಾಪಾಡುವುದು ಜನಪ್ರತಿನಿಧಿಯಾದ ನನ್ನ ಜವಾಬ್ದಾರಿ ಎಂದ ಅವರು, ಮೊದಲು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಿ ಎಂದರು. 

ಗ್ರಾಮದಲ್ಲಿ 1591 ಜನಸಂಖ್ಯೆ ಇದ್ದು, ಅವರಲ್ಲಿ 384 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 48 ಜನರಿಗೆ ಪಾಸಿಟಿವ್ ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಭಯ ಪಡುವ ಅಗತ್ಯ ಇಲ್ಲ ಎಂದು ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು.

ಕೊರೊನಾ ಬಂದರೆ ಅದನ್ನು ಅವಮಾನ ಎಂದು ಯಾರೂ ಕೂಡ ಭಾವಿಸಬೇಡಿ, ಆತ್ಮಸ್ಥೈರ್ಯದಿಂದ ಅನೇಕರು ಕೊರೊನಾವನ್ನು ಜಯಿಸಿ ಬಂದಿರುವ ನಿದರ್ಶನವಿದೆ ಎಂದರು. 

ಅಧಿಕಾರಿಗಳಿಗೆ ಕಿವಿಮಾತು :  ನೋಡ್ರಿ ಗ್ರಾಮಸ್ಥರು ನನಗೆ, ನಿಮಗೆ ಬೈಯ್ಯಲಿ ಯಾರೂ ಬೇಜಾರು ಮಾಡಿಕೊಳ್ಳುವುದು ಬೇಡ. ಗ್ರಾಮಸ್ಥರನ್ನು ಮನವೊಲಿಸಿ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಿ ಹಾಗೂ ಯಾರಿಗೆ ಪಾಸಿಟಿವ್ ಬರುತ್ತೋ ಅಂತಹವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ತಹಶೀಲ್ದಾರ್ ತನುಜಾ ಸವದತ್ತಿ, ಉಪ ತಹಸೀಲ್ದಾರ್ ನ್ಯಾಮತಿ ನಾಗರಾಜ್ ಅವರಿಗೆ ಸೂಚಿಸಿದರು.

ಕಂಟೈನ್ಮೆಂಟ್ ಝೋನ್ : 1200 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕಾಗಿರುವುದರಿಂದ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿ, ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಇಲ್ಲೇ ಬೀಡು ಬಿಟ್ಟಿದೆ ಎಂದರು.

ಗ್ರಾಮದಲ್ಲಿ ಸಂಪೂರ್ಣ ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಿರುವುದರಿಂದ ಗ್ರಾಮದಲ್ಲಿ ಯಾರಿಗೆ ಆಹಾರ ಸಾಮಗ್ರಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಅಗತ್ಯ ಇದೆಯೋ ಅಂತಹವರಿಗೆ ಫುಡ್‍ಕಿಟ್ ಹಾಗೂ ಅಗತ್ಯ ತರಕಾರಿ ನೀಡುವ ಭರವಸೆ ನೀಡಿದರು.

ತಹಶೀಲ್ದಾರ್ ತನುಜಾ ಸವದತ್ತಿ, ಉಪ ತಹ ಸೀಲ್ದಾರ್ ನ್ಯಾಮತಿ ನಾಗರಾಜ್, ಪಿಡಿಒ ಪ್ರದೀಪ್ ಕುಮಾರ್, ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!