ಜಗಳೂರು : ಕಾರ್ಮಿಕ ವರ್ಗಕ್ಕೆ ನ್ಯಾಯಯುತ ವೇತನ ಸಿಗಬೇಕು

ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಪಿ. ರೇವಣ್ಣ

ಜಗಳೂರು, ಮೇ 2- ಸಮಾಜದ ಸ್ವಚ್ಛತೆಗಾಗಿ ದಿನ ವಿಡೀ ದುಡಿಯುವ ಕಾರ್ಮಿಕ ವರ್ಗಕ್ಕೆ ನ್ಯಾಯಯುತ ಸೌಲಭ್ಯಗಳು ಸಿಗಬೇಕಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಪಿ. ರೇವಣ್ಣ ಹೇಳಿದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ನಿನ್ನೆ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕರಿಗೆ ಉಚಿತ ಮಾಸ್ಕ್, ಕುಡಿಯುವ ನೀರು, ಉಪಹಾರ ವಿತರಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲೆಡೆ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬಿದ್ದು, ಜನರ ಹಿತಕ್ಕಾಗಿ ಪ್ರಾಣದ ಹಂಗು ತೊರೆದು ಕನಿಷ್ಟ ವೇತನ ಪಡೆಯುವ ಮೂಲಕ ಸಮಾಜದ ಕೊಳೆಯನ್ನು ತೊಳೆಯುತ್ತಿರುವ ಕಾರ್ಮಿಕ ವರ್ಗಕ್ಕೆ ನಮ್ಮ ಅಳಿಲು ಸೇವೆ ಮಾಡುವ ಮೂಲಕ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದರು.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜು ಬಣಕಾರ್ ಮಾತನಾಡಿ, ಬಿಸಿಲು, ಮಳೆ ಎನ್ನದೆ  ಭಯದ ಹಂಗು ತೊರೆದು ದಿನ ನಿತ್ಯ ದುಡಿಯುತ್ತಿರುವ ಪೌರ ಕಾರ್ಮಿಕರ ಬಗ್ಗೆ ಹಲವು ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಅವರ ನೆರವಿಗೆ ಧಾವಿಸುವ ಮೂಲಕ ಸಹಾಯ ಮಾಡುತ್ತಿರುವುದು ನಾಗರಿಕ ಸಮಾಜದ ಉತ್ತಮ ಬೆಳವಣಿಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಕಂದಾ ಯಾಧಿಕಾರಿ ಸಂತೋಷ್, ಆರೋಗ್ಯಾಧಿಕಾರಿ ಕಿಫಾ ಯತ್,  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಎಸ್ಟಿ ಘಟಕ ಅಧ್ಯಕ್ಷ ಬಿ. ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಟಿ. ತಿಪ್ಪೇಸ್ವಾಮಿ, ವಿಜಯ್ ಕೆಂಚೋಳ್,  ರೇಣುಕೇಶ್, ಕರಿಯಣ್ಣ, ಆದರ್ಶ, ನಾಗೇಶ್, ರಮೇಶ್   ಇನ್ನಿತರರಿದ್ದರು.

error: Content is protected !!