ಪರಂಜ್ಯೋತಿ ಪ್ರತೀಕವೇ ಸೂರ್ಯ

ದಾವಣಗೆರೆ, ಫೆ.22- ಇಡೀ ವಿಶ್ವದ ಸೃಷ್ಠಿಯೇ ಪರ ಮಾತ್ಮನ ಅಧೀನವಾಗಿದೆ. ಪರಮಾತ್ಮನು ಪರಂಜ್ಯೋತಿ ಯೂ ಆಗಿದ್ದಾನೆ. ಪರಂಜ್ಯೋತಿಯ ಪ್ರತೀಕವೇ ಸೂರ್ಯ ನಾರಾಯಣ ಎಂದು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗತಜ್ಞ ರಾಘವೇಂದ್ರ ಗುರೂಜಿ ಹೇಳಿದರು.

ನಗರದ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ರಥಸಪ್ತಮಿ ನಿಮಿತ್ತ ಹಮ್ಮಿಕೊಳ್ಳ ಲಾಗಿದ್ದ 108 ಸೂರ್ಯಾಷ್ಟೋತ್ತರ ಶತನಾಮಾವಳಿಯೊಂದಿಗೆ ಸಾಮೂಹಿಕ ಸೂರ್ಯ ನಮಸ್ಕಾರ, ಯೋಗಯಜ್ಞ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸೂರ್ಯನಿಲ್ಲದೇ ನಮ್ಮ ಬದುಕಿಲ್ಲ. ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳ ಅಳಿವು, ಉಳಿವು ಸೂರ್ಯನನ್ನು ಆಶ್ರಯಿಸಿದೆ. ಸೂರ್ಯನ ಗುಣಸ್ವಭಾವ ಬೆಳಕು, ನಮ್ಮ ಜೀವನಕ್ಕೆ ಬೇಕಾದ ದಾರಿಯಾಗಿದೆ. ನಮ್ಮ ಬಹಿರಂಗಕ್ಕೆ ಮಾತ್ರವಲ್ಲದೇ ಅಂತರಂಗಕ್ಕೂ ಬೆಳಕಿನ ಅವಶ್ಯಕತೆ ಇದೆ. ಹೊರಗಿನ ಬೆಳಕಿಗೆ ಸೂರ್ಯ ಕಾರಣವಾದರೆ, ಒಳಗಿನ ಬೆಳಕಿಗೆ ನಮ್ಮೊಳಗಿನ ಚೈತನ್ಯ ರೂಪದಲ್ಲಿರುವ ಆತ್ಮ ವಸ್ತುವೇ ಕಾರಣ. ಹೀಗಾಗಿ ಸೂರ್ಯನು ಪರಬ್ರಹ್ಮ ಸ್ವರೂಪನೂ ಆಗಿದ್ದಾನೆ ಎಂದರಲ್ಲದೆ,  ರಥಸ ಪ್ತಮಿಯಂದು ಸೂರ್ಯೋಪಾಸನೆ ಆಚರಿಸುವುದ ರಿಂದ ಮನುಕುಲಕ್ಕೆ ಆಗುವ ಒಳ್ಳೆಯ ಪರಿಣಾಮವನ್ನು ತಿಳಿಸಿದರು.

6 ವರ್ಷದ ಬಾಲಕ ದರ್ಶಿತ್ ಆರ್. ಕಲಾಲ್‍ನಿಂದ ಹಿಡಿದು 73 ವಯೋಮಾನದ ನಿವೃತ್ತ ತಹಶೀಲ್ದಾರ್‍ ಕೆ.ಎಂ. ವಿಶ್ವನಾಥಯ್ಯನವರ ವರೆಗೆ ಅತ್ಯಂತ ಲವಲವಿಕೆಯಿಂದ 108 ಸುತ್ತಿನ ನಮಸ್ಕಾರವನ್ನು ಮಾಡಿದರು. 

ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮ, ಸೂರ್ಯ ಹೋಮ, ಪೂಜಾ ವಿಧಿ-ವಿಧಾನಗಳನ್ನು ಪ್ರತಿಷ್ಠಾನದ ರಾಘವೇಂದ್ರ ಗುರೂಜಿ ನೆರವೇರಿಸಿದರು. 

ಮಹಾಮಂಗಳಾರತಿಯನ್ನು ಜೀವ ವಿಮಾ ಕಂಪನಿಯ ಅಭಿವೃದ್ಧಿ ಅಧಿಕಾರಿ ಎ.ಆರ್. ಶೇಷಾದ್ರಿ ಮತ್ತು ಶ್ರೀಮತಿ ಸುಮಂಗಲಾ ದಂಪತಿ ನೆರವೇರಿಸಿದರು. 

ಅಂಚೆ ಇಲಾಖೆಯ ವೇದಾವತಿ, ಸುನೀತಾ ರವೀಂದ್ರ, ರಶ್ಮಿ ಆರ್. ಕಲಾಲ್ ಇನ್ನಿತರರು ಭಾಗವಹಿಸಿದ್ದರು. ಹೂವಿನ ಸೇವೆಯನ್ನು ಕೆ.ಎಂ. ವಿಶ್ವನಾಥಯ್ಯ ಮತ್ತು ಲಕ್ಷ್ಮಣ್ ಹೆಚ್.ಎನ್. ಅರ್ಪಿಸಿದರು. ಮಾಸ್ಟರ್ ಪ್ರಶಾಂತ್, ಪೃಥ್ವಿದೇವ್, ಮುಖೇಶ್‍ದೇವ್ ಹಾಗೂ ರಾಘವೇಂದ್ರ ವಾಂಜ್ರೆ ಸಹಕರಿಸಿದರು. 

error: Content is protected !!