ಬಲಾಢ್ಯರು ಮೀಸಲಾತಿ ಕೇಳುವುದು ನ್ಯಾಯವಲ್ಲ

ವಾಲ್ಮೀಕಿ ಜಾತ್ರೆಯಲ್ಲಿ ದಲಿತ ಮುಖಂಡ ಮಾತಸಂದ್ರ ಮುನಿಯಪ್ಪ

ರಾಜನಹಳ್ಳಿ (ಚಳ್ಳಕೆರೆ ತಿಪ್ಪೇಸ್ವಾಮಿ ವೇದಿಕೆ) ಫೆ.8 – ಎಸ್ಸಿ-ಎಸ್ಟಿ  ಜನರಿಗೆ ಕುಲ ಕಸುಬುಗಳಿರುವ ಕಾರಣ ಮತ್ತು ತುಳಿತಕ್ಕೆ ಒಳಗಾಗಿರುವುದನ್ನು ಗುರುತಿಸಿ ಮೀಸಲಾತಿ ನೀಡಲಾಗಿದೆ. ಈಗ ಬಲಾಢ್ಯರು ಮೀಸಲಾತಿ  ಕೇಳುತ್ತಿರುವುದು ನ್ಯಾಯವಲ್ಲ ಎಂದು ದಲಿತ ಮುಖಂಡ ಮಾರಸಂದ್ರ ಮುನಿಯಪ್ಪ ಹೇಳಿದರು.

ಇಲ್ಲಿನ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದಲ್ಲಿ ಇಂದು ಆರಂಭಗೊಂಡಿರುವ ಎರಡು ದಿನಗಳ ವಾಲ್ಮೀಕಿ ಜಾತ್ರೆಯಲ್ಲಿ ಬುಡಕಟ್ಟು ಸಮುದಾಯಗಳ ಸಂಘಟನೆ ಮತ್ತು ಸವಾಲುಗಳು ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸ್ಸಿ-ಎಸ್ಟಿಗೆ ಬೇರೇ ಜಾತಿಯ ವರನ್ನು ಸೇರಿಸಿದರೆ ಮೂಲ ಎಸ್ಸಿ-ಎಸ್ಟಿಗಳಿಗೆ ತೊಂದರೆ ಆಗಲಿದೆ. ಈಗ ನಾವು ಪಡೆಯುತ್ತಿರುವ ಹಕ್ಕುಗಳನ್ನು ಅವರು ಕಸಿದು ಕೊಳ್ಳುತ್ತಾರೆ. ಈ ಬಗ್ಗೆ ನಾವು ಜಾಗೃತರಾಗಿ ಸೇರ್ಪಡೆಗಳನ್ನು ನೇರವಾಗಿ ವಿರೋಧಿಸಬೇಕೆಂದು ಕರೆ ನೀಡಿದರು.

ಈಗ ತಾನೆ ಕಣ್ಣು ಬಿಡುತ್ತಿರುವ ಎಸ್ಸಿ-ಎಸ್ಟಿ ಜನರನ್ನು ಮುಗಿಸಲು ಸಂಚು ರೂಪಿಸಲಾಗುತ್ತಿದೆ. ಮನುವಾದಿಗಳ ಪಿತೂರಿಯಿಂದಾಗಿ ಮೀಸಲಾತಿ ಕೇಳಲು ಬೇರೆ ಜಾತಿಯವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ ಮುನಿಯಪ್ಪ ಅವರು, ದೇಶ ದಲ್ಲಿ 35 ಕೋಟಿ ಎಸ್‌ಸಿ-ಎಸ್ಟಿ ಜನ ಇದ್ದರೂ ಇದುವರೆಗೂ ಪ್ರಧಾನಿ ಆಗುವುದಕ್ಕೆ ಆಗಿಲ್ಲ, ಉಪ ಪ್ರಧಾನಿ, ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಹೆಸರಿಗಷ್ಟೇ ನೀಡಿ, ಅಧಿಕಾರವನ್ನು ಅವರು ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್ಸಿ-ಎಸ್ಟಿ ಜನಾಂಗಗಳು ಒಂದು ದೇಹದ ಎರಡು  ಕೈಗಳಿದ್ದಂತೆ. ಈ ಎರಡು ಕೈಗಳು ಸೇರಿದರೆ ದೇಶ-ರಾಜ್ಯದಲ್ಲಿ ಚುಕ್ಕಾಣಿ ಹಿಡಿಯು ವುದರ ಜೊತೆಗೆ ಭೂಮಿಯ ಹಕ್ಕನ್ನು ಪಡೆದು ಕೊಳ್ಳಬಹುದೆಂದು ಮುನಿಯಪ್ಪ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾರ್ಮಿಕ ಮುಖಂಡ ಹೆಚ್‍.ಕೆ. ರಾಮಚಂದ್ರಪ್ಪ ಮೀಸಲಾತಿ ಹೋರಾಟ ಮಾಡುತ್ತಿರುವ ಮಠಾಧೀಶರು ಖಾಸಗೀಕರಣದ ವಿರುದ್ದ ಮತ್ತು ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ದವೂ ಹೋರಾಟ ಮಾಡಬೇಕೆಂದರು. ಖಾಸಗೀಕರಣದಿಂದ ಎಸ್ಸಿ-ಎಸ್ಟಿ ಜನರಿಗೆ ಹೆಚ್ಚು ತೊಂದರೆ ಆಗಲಿದೆ. ಈ ಬಗ್ಗೆ ಜಾಗೃತಿ ವಹಿಸಬೇಕೆಂದು ರಾಮಚಂದ್ರಪ್ಪ ತಿಳಿಸಿದರು.

ಚಳುವಳಿ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‍ ಜಾರಕಿಹೊಳಿ, ಎಲ್.ಮುನಿಸ್ವಾಮಿ, ಅಶ್ವತ್ಥಪ್ಪ, ಬೆಳ್ಳಿ ಗಂಗಾಧರ್, ಕೆಂಪರಾಮಯ್ಯ, ಸಿರಿಗೆರೆ ತಿಪ್ಪೇಶ್, ಅನಂತಯ್ಯಮ ದೇವರಾಜ್ ಕುಪ್ಪೂರು, ಶ್ರೀನಿವಾಸ್ ನಾಯಕ ಸಣ್ಣ ನಾಯಕ , ಅನುಗ್ರಹ ಆಂಜಿನಪ್ಪ, ಹಾಸನ ಮಹಾಂತಪ್ಪ, ಹರಿಹರದ ಹಂಚಿನ ನಾಗಣ್ಣ, ರೈತ ಸಂಘದ ಬೇವಿನಹಳ್ಳಿ ಮಹೇಶ್, ಕೆ.ಎನ್.ಹಳ್ಳಿಯ ವಿ ಕುಬೇರಪ್ಪ, ತಿಮ್ಮೇನಹಳ್ಳಿ ಚಂದ್ರಪ್ಪ, ಜಿಗಳಿ ಆನಂದಪ್ಪ, ಸಣ್ಣ ತಮ್ಮಪ್ಪ ಬಾರ್ಕಿ, ದಾವಣಗೆರೆಯ ಬಿ.ವೀರಣ್ಣ ಟಿ. ಶ್ರೀನಿವಾಸ್ ದಾಸಕರಿಯಪ್ಪ, ತರಕಾರಿ ಚಂದ್ರಪ್ಪ, ವಿನಾಯಕ ಪೈಲ್ವಾನ್, ಗಣೇಶ್ ಹುಲ್ಲುಮನಿ, ರಾಘು ದೊಡ್ಡಮನಿ, ಶಾಮನೂರು ಪ್ರವೀಣ್, ಮಂಗೇನಹಳ್ಳಿ ಲೋಹಿತ್, ಮಾಡಾಳ್ ಲೋಕೇ ಶ್ವರ್ ಸೇರಿದಂತೆ ಇನ್ನೂ ಅನೇಕರು ಭಾಗವ ಹಿಸಿದ್ದರು. ಬಸವರಾಜ್ ನಾಯಕ ಸ್ವಾಗತಿಸಿದರು, ಪ್ರತಾಪ್ ಮದಕರಿ ನಿರೂಪಿಸಿದರೆ, ಹರಪನಹಳ್ಳಿ ಹೆಚ್‍.ಕೆ. ಹಾಲೇಶ್ ವಂದಿಸಿದರು.

error: Content is protected !!