ಬಾಬೂಜೀ ರೈಲ್ವೆ, ಕೃಷಿ ಆಧುನೀಕರಿಸಿದರು

ಬಾಬು ಜಗಜೀವನ್ ರಾಮ್‌ರವರ ಜನ್ಮ ದಿನಾಚರಣೆಯಲ್ಲಿ ಡಿ. ಬಸವರಾಜ್

ದಾವಣಗೆರೆ, ಏ. 7- ಜಾತಿವಾದದ ವಿರುದ್ಧ ಹೋರಾಡುವ ಜೊತೆಗೆ, ಜಗಜೀವನ್‍ರಾಮ್ ರೈಲ್ವೆ ಮತ್ತು ಕೃಷಿ ಎರಡನ್ನೂ ಆಧುನೀಕರಿಸಿದರು, 1971 ರಲ್ಲಿ ಬಾಂಗ್ಲಾ ದೇಶ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸ್ಮರಿಸಿದರು.

ಅವರು ನಗರದ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ (ಡಾ. ಶಾಮನೂರು ಶಿವಶಂಕರಪ್ಪ ಭವನ) ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನ ರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ, ದೇಶದಲ್ಲಿ ಪಟ್ಟಭದ್ರ ಹಿತಾಸಕ್ತಿಗಳನ್ನು ದಮನ ಮಾಡಲು ತುರ್ತು ಪರಿಸ್ಥಿತಿ ಹೇರಿರುವುದನ್ನು ವಿರೋಧಿಸಿ, ಸ್ವಂತ ರಾಜಕೀಯ ಪಕ್ಷವನ್ನು ಪ್ರಾರಂಭಿಸಿ, ನಂತರದ ರಾಜಕೀಯ ಬೆಳವಣಿಗೆ ಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಗೊಂಡರು. ಅವರ ನಿಧನಸ ನಂತರ ಅವರ ಪುತ್ರಿ ಮೀರಾ ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷ ಉನ್ನತ ಸ್ಥಾನ ನೀಡಿರುವುದನ್ನು ತಿಳಿಸಿದರು.

ಓರ್ವ ದಲಿತನಾಗಿದ್ದರೂ ಸಹ ಎಂದಿಗೂ ಹಿಂಜರಿಕೆ ಇಲ್ಲದೇ ದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದು ಖಾತೆಗಳನ್ನು ನಿರ್ವಹಿಸಿದ ಕೀರ್ತಿ ಬಾಬು ಜಗಜೀವನ್ ರಾಂ ಅವರಿಗೆ ಸಲ್ಲುತ್ತದೆ ಎಂದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಘಟಕದ ಮೈನುದ್ದೀನ್ ಮಾತನಾಡಿ, ಬಾಬು ಜಗಜೀವನ್ ರಾಂ ಅವರ ಇಡೀ ಕುಟುಂಬ ದೇಶಕ್ಕಾಗಿ ತಮ್ಮದೇ ಆದ ಸೇವೆ ಸಲ್ಲಿಸಿದೆ ಎಂದು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭದಲ್ಲಿ ಗೀತಾ ಚಂದ್ರಶೇಖರ್, ಜಿಕ್ರಿಯಾ, ಶ್ರೀಕಾಂತ್ ಬಗರೆ, ಪ್ರವೀಣ್ ಫಾರ್ಮಾ, ಹರೀಶ್ ಕೆ.ಎಲ್., ಬಾಷಾ, ಅಲೆಕ್ಸಾಂಡರ್(ಜಾನ್), ಹೆಚ್.ಇಮ್ತಿಯಾಜ್ ಮತ್ತಿತರರಿದ್ದರು. 

error: Content is protected !!