ಹರಿಹರ, ಜ.18- ನಗರಕ್ಕೆ ಎಸ್.ಟಿ. ಮೀಸಲಾತಿ ಹೋರಾಟದ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಪಾದಯಾತ್ರೆ ಮೂಲಕ ರಾಣೇಬೆನ್ನೂರಿನಿಂದ ನಗರಕ್ಕೆ ಆಗಮಿಸಿದಾಗ ಕುರುಬ ಸಮಾಜದವರು ಅದ್ಧೂರಿಯಾಗಿ ಬರಮಾಡಿಕೊಂಡರು.
ತುಂಗಭದ್ರಾ ನದಿಯ ಸೇತುವೆಯ ಮೇಲೆ ಶ್ರೀಗಳಿಗೆ ಬೃಹತ್ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.
ಮಹಿಳೆಯರು ಕುಂಭಮೇಳಗಳೊಂದಿಗೆ ಇಪ್ಪತ್ತಕ್ಕೂ ಹೆಚ್ಚು ಡೊಳ್ಳಿನ ತಂಡಗಳು, ನಂದಿಕೋಲು, ಸಮಾಳ ಸ್ತಬ್ದ ಚಿತ್ರಗಳು ಭಜನೆ ಮತ್ತಿತರೆ ಕಲಾತಂಡಗಳು ಮೆರವಣಿಗೆ ಯಲ್ಲಿ ಪಾಲ್ಗೊಂಡು ಮೆರಗನ್ನು ತಂದವು.
ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಮಾತನಾಡಿ, ಸಮಾಜದ ಜನತೆಯ ಒಳಿತಿಗಾಗಿ ಎಸ್.ಟಿ. ಮೀಸಲಾತಿ ಹೋರಾಟದ ಪಾದಯಾತ್ರೆ ಹಮ್ಮಿಕೊಂಡಿದ್ದ ರಿಂದ ಸಮಾಜದ ಸಂತಾನದ ಒಳಿತಿಗಾಗಿ ಮತ್ತು ಏಳಿಗೆಗಾಗಿ ಹೋರಾಟ ಹಮ್ಮಿ ಕೊಂಡಿದ್ದು, ನಾನು ನಿರೀಕ್ಷಣೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಭೂತಪೂರ್ವ ಬೆಂಬಲವನ್ನು ಸಮಾಜದವರು ನೀಡುತ್ತಿರು ವುದರಿಂದ ಈ ಹೋರಾಟದಲ್ಲಿ ನಾವು ಜಯ ಗಳಿಸುವಲ್ಲಿ ಯಶಸ್ವಿಯಾಗುವುದಾಗಿ ಹೇಳಲು ಸಂತೋಷವಾಗುತ್ತದೆ. ಇದೇ ರೀತಿಯ ಫೆಬ್ರವರಿ 7 ರಂದು ಬೆಂಗಳೂರಿನ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ನಾವು ಎಸ್.ಟಿ. ಮೀಸಲಾತಿಗಾಗಿ ಪಾದಯಾತ್ರೆ ನಡೆಸುತ್ತಿರುವುದು ಯಾವುದೇ ಅನ್ಯ ಸಮಾಜದ ಹಕ್ಕುಗಳನ್ನು ಪಡೆಯಲು ಅಲ್ಲ. ನಮ್ಮ ಸಮಾಜದ ಹಿರಿಯ ಮುಖಂಡರು ಕಳೆದ ಹಲವಾರು ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ, ಅವರಿಗೆ ಸರಿಯಾದ ಒಗ್ಗಟ್ಟಿನ ಶಕ್ತಿ ಸಿಗದೆ ಇದ್ದ ಪರಿಣಾಮವಾಗಿ ನಮ್ಮ ಸಮಾಜಕ್ಕೆ ಹಿನ್ನಡೆಯಾಗಿದ್ದು, ಈಗ ಸಮಾಜದ ಶಕ್ತಿಯನ್ನು ತೋರಿಸುವ ಮೂಲಕ ನಮ್ಮ ಹಕ್ಕನ್ನು ಪಡೆಯಲು ಈ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದಕ್ಕೆ ಇತರೆ ಸಮಾಜದವರೂ ಸಹ ಬೆಂಬಲ ನೀಡುತ್ತಿರುವುದರ ಪರಿಣಾಮವಾಗಿ ಈ ಹೋರಾಟದಲ್ಲಿ ಜಯ ಗಳಿಸುವ ವಿಶ್ವಾಸ ಹೊಂದಿರುವುದಾಗಿ ಹೇಳಿದರು.
ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿದರು. ಶಾಸಕ ಎಸ್. ರಾಮಪ್ಪ ಮಾತನಾಡಿ, ಸಮಾಜದ ಜನರ ಒಳಿತಿಗಾಗಿ ಪ್ರಾರಂಭವಾದ ಪಾದಯಾತ್ರೆಯಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಯಶಸ್ವಿಯಾಗುತ್ತಾರೆ. ಶ್ರೀಗಳು ಅದನ್ನು ಪಡೆದು ಸಮಾಜದ ಜನರಿಗೆ ಒಳಿತು ಮಾಡಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ನಮಗೆ ಇದೆ ಎಂದು ಹೇಳಿದರು.
ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕುರುಬ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಗತಿ ಹೊಂದಲು ಎಸ್.ಟಿ. ಸೌಲಭ್ಯದ ಅವಶ್ಯಕತೆ ಇರುವುದರಿಂದ ನಾವು ಕೂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೇಲೆ ಒತ್ತಡ ಹಾಕುವ ಮೂಲಕ ಶ್ರೀಗಳ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮೀಜಿ, ಶ್ರೀ ಸೋಮಲಿಂಗೇಶ್ವರ ಮಹಾಸ್ವಾಮೀಜಿ, ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮೀಜಿ, ಮುದ್ದೇನ ಶ್ರೀಗಳು, ಮೈಲಾರ ರಾಮಪ್ಪ ಗೊರಪ್ಪ, ಕುರುಬ ಸಮಾಜದ ಅಧ್ಯಕ್ಷ ಕೆ.ಜಡಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಗಂಗಾಧರ್, ಮಲೇಬೆನ್ನೂರು, ಬಿ. ರೇವಣಸಿದ್ದಪ್ಪ, ಕುಣೆಬೆಳಕೇರಿ ದೇವೇಂದ್ರಪ್ಪ, ದೂಡ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕುಂಬಳೂರು ವಿರೂಪಾಕ್ಷಪ್ಪ, ನಂದಿಗಾವಿ ಶ್ರೀನಿವಾಸ್, ಸಿ.ಎನ್. ಹುಲಗೇಶ್, ಚೂರಿ ಜಗದೀಶ್, ಬೀರಪ್ಪ ಪ್ರಾಂಶುಪಾಲ, ನಾಗೇಂದ್ರಪ್ಪ, ವಿರುಪಾಕ್ಷಪ್ಪ, ಸುರೇಶ್ ಚಂದಪೂರ್, ನಿಂಬಕ್ಕ ಚಂದಪೂರ್, ಡಿ.ವೈ. ಇಂದಿರಾ, ಪರಮೇಶ್ವರಪ್ಪ, ಐರಣಿ ಅಣ್ಣಪ್ಪ, ಕನ್ನಪ್ಪ ಭಾನುವಳ್ಳಿ, ಎಸ್.ಎಂ. ವಸಂತ್, ಡಾ. ಹನುಮಂತಪ್ಪ ಹಳ್ಳಳ್ಳಿ, ಹದಡಿ ನಿಂಗಪ್ಪ, ನಿಂಗಮ್ಮನವರ್, ರಾಜೇಂದ್ರ, ಕೊಕ್ಕನೂರು ದ್ಯಾಮಪ್ಪ, ಚಂದ್ರಪ್ಪ, ಡಾ. ಜಯಪ್ರಕಾಶ್, ಬಸವರಾಜಪ್ಪ, ಮಹದೇಶ್ವರ ಮಹಾಸ್ವಾಮಿಗಳು, ಶರವಣ ಶ್ರೀಗಳು, ಮಹಾದೇವಯ್ಯ ಶ್ರೀಗಳು, ಸರಸ್ವತಿ, ಚೆನ್ನಮ್ಮ, ಪ್ರೇಮಲತಾ, ಸುವರ್ಣ ನಾಗರಾಜ್, ಶಶಿಕಲಾ ಮತ್ತು ಇತರರು ಹಾಜರಿದ್ದರು.
ಪೊಲೀಸ್ ಇಲಾಖೆಯ ಆಡಿಷನಲ್ ಎಸ್ಪಿ ರಾಜೀವ್, ಸಿಪಿಐಗಳಾದ ಸತೀಶ್, ದೇವರಾಜ್, ಪಿಎಸ್ಐಗಳಾದ ಸುನಿಲ್, ಬಸವರಾಜ್, ಡಿ. ರವಿಕುಮಾರ್, ಶೈಲಾಶ್ರೀ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.
ಷಣ್ಮುಖ ಮತ್ತು ತಂಡದವರಿಂದ ಕನಕದಾಸರ ಹಾಡುಗಳ ಮೂಲಕ ಪ್ರಾರ್ಥನೆ ಮಾಡಲಾಯಿತು.