ಶ್ರೀಮಂತರು ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಬೇಕು : ಶಾಸಕ ಎಸ್. ರಾಮಪ್ಪ

ಮಲೇಬೆನ್ನೂರು, ಜ.8- ಶ್ರೀಮಂತರು ತಮ್ಮ ಮಕ್ಕಳ ಮದುವೆಯಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿ ಬಡಜನರಿಗೆ ನೆರವಾಗುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

 ಅವರು ಶುಕ್ರವಾರ ಹಾಲಿವಾಣ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೊಡ್ಡ ಎಡೆಜಾತ್ರೆ, ಮರಿಬನ್ನಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಟುಂಬದಲ್ಲಿ ವ್ಯತ್ಯಾಸಗಳು ಬರುವುದು ಸಹಜ, ಅವುಗಳನ್ನು ಸರಿಪಡಿಸಿಕೊಂಡು ಹೋದರೆ ಬದುಕು ಸಮೃದ್ಧಿಯಿಂದ ಕೂಡಿರುತ್ತದೆ ಎಂದು ರಾಮಪ್ಪ ಅವರು ನೂತನ ವಧು-ವರರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ರಶ್ಮಿ ವೈ. ನಾಗಪ್ಪ ಮಾತನಾಡಿ, ಸತಿ-ಪತಿಗಳ ನಡುವೆ ಸಾಮರಸ್ಯ ಹಾಗೂ ಸಮಾನತೆ ಇದ್ದರೆ ಜೀವನ ಸಂತೋಷವಾಗಿರುತ್ತದೆ ಎಂದರು.

ಈಶ್ವರೀಯ ವಿಶ್ವವಿದ್ಯಾಲಯದ ಮಲೇಬೆ ನ್ನೂರು ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾ ಮಾತನಾಡಿ, ಸಂಸಾರದಲ್ಲಿ ಬಂದ ನಂತರ ಪರಮಾತ್ಮನನ್ನು ಮರೆಯಬೇಡಿ. ದುಃಖದಲ್ಲಿ ಎಲ್ಲರೂ ಪರಮಾತ್ಮನನ್ನು ಮಾತ್ರ ನೆನೆದು, ಸುಖ ಬಂದಾಗ ಮರೆತುಬಿಡಬೇಡಿ. ನಿಮ್ಮ ಸಂತೋಷದಲ್ಲೂ ಪರಮಾತ್ಮನನ್ನು ಪ್ರಾರ್ಥಿಸಿ, ಉತ್ತಮ ಹಾದಿಯಲ್ಲಿ ನಡೆದರೆ ನೀವು ಯಾವತ್ತೂ ಸುಖ-ಶಾಂತಿಯಿಂದ ಇರಬಹುದೆಂದು ವಧು-ವರರಿಗೆ ಹೇಳಿದರು.

ಹದಡಿ ಚಂದ್ರಗಿರಿ ಮಠದ ಸದ್ಗುರು ಶ್ರೀ ಮುರಳೀಧರ ಸ್ವಾಮೀಜಿ ಮಾತನಾಡಿ, ವಧು-ವರರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ಮಾಡಿ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಜಿ. ದ್ಯಾಮಣ್ಣ, ಉದ್ಯಮಿ ಕುಂಬಳೂರು ವಿರೂಪಾಕ್ಷಪ್ಪ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್‌ ಪಾಟೀಲ್‌, ತಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಬಿ. ರೋಷನ್‌, ಐರಣಿ ಅಣ್ಣಪ್ಪ, ನಿವೃತ್ತ ಪೊಲೀಸ್‌ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್‌ ಮಾತನಾಡಿದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ. ಕುರುಬ ಸಮಾಜದ ಕಾರ್ಯದರ್ಶಿ ಕೆ.ಪಿ. ಗಂಗಾಧರ್‌, ಗ್ರಾ.ಪಂ. ಸದಸ್ಯರಾದ ದಿಬ್ಬದಹಳ್ಳಿ ಓಂಕಾರಪ್ಪ, ಕೊಮಾರನಹಳ್ಳಿಯ ಮಡಿವಾಳರ ಬಸವರಾಜ್‌, ಕೊಪ್ಪದ ಚಂದ್ರಪ್ಪ, ಹಾಲಿವಾಣದ ಲಲಿತಮ್ಮ ಪೂಜಾರ್‌, ಲಕ್ಷ್ಮೀದೇವಿ ಮಂಜುನಾಥ್‌, ದೀಪಾರಾಜು, ಡಿ.ಡಿ. ಚಿಕ್ಕಪ್ಪ, ಎಸ್‌.ಇ. ಹಾಲೇಶ್‌, ರೇಣುಕಮ್ಮ, ವಿಶಾಲಮ್ಮ ನಾಗರಾಜ್, ಗ್ರಾಮದ ತಿಪ್ಪಣ್ಣ ಮೇಷ್ಟ್ರು, ಕೆ.ಪಿ. ಕುಮಾರಸ್ವಾಮಿ, ಟಿ. ಕರಿಯಪ್ಪ, ಪಿ.ಕೆ. ಮೋಹನ್‌, ಎ.ಕೆ. ಕರಿಯಪ್ಪ, ಕುಡಪಲಿ ತಿಪ್ಪೇಶ್‌, ಪಿಡಿಓ ರಮೇಶ್‌, ಮಲೇಬೆನ್ನೂರಿನ ಪಿ.ಹೆಚ್‌. ಶಿವಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದ ರೂವಾರಿ ಹಾಗೂ ತಾ.ಪಂ. ಮಾಜಿ ಅಧ್ಯಕ್ಷ ಎಸ್‌.ಜಿ. ಪರಮೇಶ್ವರಪ್ಪ ಸ್ವಾಗತಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್‌.ಜಿ. ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲ್‌ ಕಲೆಕ್ಟರ್‌ ಡಿ.ಡಿ. ರೇವಣಸಿದ್ದಪ್ಪ ನಿರೂಪಿಸಿದರೆ, ಕೊನೆಯಲ್ಲಿ ಗೊಂದೇರ ರೇವಣಸಿದ್ದಪ್ಪ ವಂದಿಸಿದರು.

ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣದ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಮುನ್ನ ಆಗಮಿಸಿ, ಬೀರ ದೇವರಿಗೆ ಪೂಜೆ ಸಲ್ಲಿಸಿದರು.

error: Content is protected !!