ರಾಜಕಾರಣಿಗಳು ಅಭಿವೃದ್ಧಿ ಜೊತೆಗೆ ಕಷ್ಟದಲ್ಲಿರುವವರ ಕಂಬನಿಗೆ ಮಿಡಿಯಬೇಕು

ರಾಜಕಾರಣಿಗಳು ಅಭಿವೃದ್ಧಿ ಜೊತೆಗೆ ಕಷ್ಟದಲ್ಲಿರುವವರ ಕಂಬನಿಗೆ ಮಿಡಿಯಬೇಕು

ಜಗಳೂರಿನ ಶಾಸಕ ಬಿ. ದೇವೇಂದ್ರಪ್ಪ

ಜಗಳೂರು, ಜು.31- ರಾಜಕಾರಣಿಗಳು ಸಮಾಜದಲ್ಲಿ ಕೇವಲ ಕಾಮಗಾರಿ, ಅಭಿವೃದ್ದಿಗೆ ಸೀಮಿತವಾಗದೇ ಕಷ್ಟದಲ್ಲಿರುವವರ ಕಂಬನಿಗೆ ಮಿಡಿಯುವ ಹೃದಯ ಸ್ಪರ್ಶಿಗಳಾಗಬೇಕು, ಸಾತ್ವಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಅವರ ವಯೋನಿವೃತ್ತಿ ಅಂಗವಾಗಿ ತಾಲ್ಲೂಕು ನೌಕರರ ಸಂಘ, ವಿವಿಧ ಸಂಘ-ಸಂಸ್ಥೆಗಳ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ನೌಕರರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ ವಯೋನಿವೃತ್ತಿ ಅಂಗವಾಗಿ ತೋರಣಗಟ್ಟೆ ಗ್ರಾಮದ ಬಡಪ್ಪ ದಂಪತಿಯ ಪುತ್ರಿ  ತುಳಸಿಯ ಗ್ಯಾಂಗ್ರಿನ್‌ಗೆ ಶಸ್ತ್ರಚಿಕಿತ್ಸೆ ಕೊಡಿಸಿ ದತ್ತು ಪಡೆದಿರುವೆ, ಉಜ್ವಲ ಭವಿಷ್ಯ ರೂಪಿಸುವೆ ಎಂದು ಅವರು ಭರವಸೆ ನೀಡಿದರು.

ನಾನು ಅಪಘಾತಕ್ಕೀಡಾಗಿ ಮರುಜೀವ ಪಡೆದು ಶಾಸಕನಾಗಿರುವುದು ದರ್ಪ ಮೆರೆಯಲು ಅಲ್ಲ. ಜನಸೇವೆ ಮಾಡಲು ಸೇವಕನಾಗಿ ಬಂದಿರುವೆ.ಬರುವ ಶ್ರಾವಣದಲ್ಲಿ ಅನಾಥ ನಿಧಿ ಸಂಗ್ರಹಕ್ಕೆ ಜೋಳಿಗೆ ಹಾಕುವೆ. ಸಂಗ್ರಹವಾದ ನಿಧಿಯನ್ನು ಅನಾಥರಿಗೆ, ನಿರ್ಗತಿಕರ ಸಹಾಯಕ್ಕೆ ಬಳಕೆ ಮಾಡಲಾಗುವುದು ಎಂದರು.

`ಜಗತ್ತು ನಗುತ್ತಿರಲಿ, ಜಗದಳವು ನನಗಿರಲಿ’ ಎಂಬ ಸ್ವಭಾವ ಹೊಂದಿದ ಮಹೇಶ್ವರಪ್ಪ ನನ್ನ ವಿದ್ಯಾರ್ಥಿ ಜೀವನದಲ್ಲಿ ಚಿತ್ರದುರ್ಗದ ಕಲಾ ಕಾಲೇಜು  ಹಾಸ್ಟೆಲ್‌ನಲ್ಲಿ ಅನ್ನ ಹಾಕಿದ್ದನ್ನು ಮರೆತಿಲ್ಲ. ತಾಲ್ಲೂಕಿನಲ್ಲಿ 27 ವರ್ಷಗಳ ಕಾಲ ತನ್ನ ಪತ್ನಿಯ ಸಹಕಾರದಿಂದ ಜಾತ್ಯತೀತವಾಗಿ ಎಲ್ಲಾ  ಜನತೆಯ ಮೆಚ್ಚುಗೆಗೆ ಪಾತ್ರರಾಗಿ ಅಪಾರ ಸ್ನೇಹ ಬಳಗ ಹೊಂದಿರುವುದು ಶ್ಲ್ಯಾಘನೀಯ ಎಂದರು.

ಮನುಷ್ಯ, ಕಾಗೆಯು ತನ್ನ ಬಳಗವನ್ನು ಕೂಗಿ ಕರೆಯುವಂತೆ ಹಂಚಿ ತಿನ್ನುವ ಮನೋಭಾವ ಮೈಗೂಡಿಸಿಕೊಂಡು, ಮಹೇಶ್ವರಪ್ಪ  ಎಲ್ಲರೊಳಗೆ ಒಂದಾಗಿ ಬಾಳಿದ್ದಾರೆ ಎಂದು ಶಾಸಕರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, 1995 ರಲ್ಲಿ ಎಸ್.ಡಿ.ಎ ವೃತ್ತಿಗೆ ನೇಮಕೊಂಡು ಸೇರಿ ನಂತರ 1996 ರಲ್ಲಿ ಜಗಳೂರಿಗೆ ವಾರ್ಡನ್ ಆಗಿ ಆಗಮಿಸಿದೆ. ನಂತರ ತಾಲ್ಲೂಕಿನ ಜನತೆಯನ್ನು ತುಂಬಾ ಹಚ್ಚಿಕೊಂಡು ಸೇವೆಗೈದೆ. ಪರಿಣಾಮ ಜಗಳೂರು ಜನತೆಯ ಆತ್ಮೀಯತೆಯಲ್ಲಿ ನನ್ನನ್ನು ವಯೋನಿವೃತ್ತಿ ಕಳೆದಿದ್ದು, ನನ್ನ ಸೌಭಾಗ್ಯ, ತಾಲ್ಲೂಕಿನ ಜನತೆಯ ಅಭಿಮಾನಕ್ಕೆ ಚಿರಋಣಿ ಎಂದು  ಗಳಗಳನೇ ಕಣ್ಣೀರಿಟ್ಟರು.

ಈ ಸಂದರ್ಭದಲ್ಲಿ ಪತ್ನಿ ಗಂಗಮ್ಮ ಮಹೇಶ್ವರಪ್ಪ,  ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ನಾಗರಾಜ್, ತಹಶೀಲ್ದಾರ್ ಸಂತೋಷ್ ಕುಮಾರ್, ತಾ.ಪಂ. ಇಓ ಚಂದ್ರಶೇಖರ್, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಟಿಎಚ್‌ಒ ಡಾ.ನಾಗರಾಜ್, ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ್‌ಕುಮಾರ್, ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಮಿಥುನ್ ಖಿಮಾವತ್, ಲಿಂಗರಾಜ್, ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್, ಹರಿಹರ ಸಹಾಯಕ ನಿರ್ದೇಶಕ ನಾಸಿರುದ್ದೀನ್, ಸಹಾಯಕ ನಿರ್ದೇಶಕಿ ಸುನೀತಾ, ನಿಲಯ ಮೇಲ್ವಿಚಾಕರು ಮುಂತಾದವರಿದ್ದರು.

error: Content is protected !!