ಹರಿಹರದಲ್ಲಿ ಡಿಎಸ್ಎಸ್ ಪ್ರತಿಭಟನೆ
ಹರಿಹರ, ಜು. 27 – ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಆಗ್ರಹಿಸಿ ಬುಧವಾರ ನಗರದಲ್ಲಿ ದಸಂಸ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಯಿಂದ ತಹಶೀಲ್ದಾರ್ ಪೃಥ್ವಿ ಸಾನಿಕಂ ರವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಅರ್ಪಿಸಲಾಯಿತು. ನಂತರ ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೂರು ತಿಂಗಳ ಹಿಂದೆ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಕುಕಿಜೋ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲು ಮಾಡಿ ಅವರ ಮೇಲೆ ಗುಂಪೊಂದು ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋ ಹರಿದಾಡಿದೆ. ಇದು ಮಣಿಪುರ ಹಿಂಸಾಚಾರದ ಆಘಾತಕಾರಿ ಮುಖವನ್ನು ತೆರೆದಿಟ್ಟಿದೆ ಎಂದು ಕಿಡಿ ಕಾರಿದರು.
ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿರುವ ಮಣಿಪುರ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕೆಂಬುದು ಸಂಘಟನೆಯ ಆಗ್ರಹವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಡ್ಲೆಗೊಂದಿ ಗ್ರಾ.ಪಂ. ಸದಸ್ಯ ತಿಮ್ಮಣ್ಣ, ಭಾನುವಳ್ಳಿ ಚೌಡಪ್ಪ ಸಿ., ಆನಂದ ಬೆಳ್ಳೂಡಿ, ಪ್ರವೀಣ್, ಲಿಂಗರಾಜ್, ಗುಳ್ಳಪ್ಪ, ನಿಂಗರಾಜ್, ಮಂಜುನಾಥ್, ಹನುಮಂತ, ಹರೀಶ್, ಯಲ್ಲಪ್ಪ, ಕೆ.ಎಚ್. ಹನುಮಂತಪ್ಪ ಎಚ್. ಪಕ್ಕೀರಪ್ಪ, ಈರಣ್ಣ ಬಿ.ಎ. ಹನುಮಜ್ಜ, ಹನುಮಕ್ಕ, ನಾಗಮ್ಮ, ಪುಷ್ಪ, ಭಾಗ್ಯಮ್ಮ, ಸುಶೀಲಮ್ಮ, ಹಾಲಮ್ಮ, ನಿರ್ಮಲಮ್ಮ, ಗುಳ್ಯಪ್ಪ ಹಾಗು ಇತರರಿದ್ದರು.