ಕಾಂಗ್ರೆಸ್- ಸಿಪಿಐ ತತ್ವ, ಸಿದ್ದಾಂತ ಒಂದೇ ನಾಣ್ಯದ 2 ಮುಖಗಳು

ಕಾಂಗ್ರೆಸ್- ಸಿಪಿಐ ತತ್ವ, ಸಿದ್ದಾಂತ ಒಂದೇ ನಾಣ್ಯದ 2 ಮುಖಗಳು

ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಮಾಯಕೊಂಡ ಶಾಸಕ ಬಸವಂತಪ್ಪ

ದಾವಣಗೆರೆ, ಜು. 27 – ಕಮ್ಯೂನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ತತ್ವ ಮತ್ತು ಸಿದ್ದಾಂತಗಳು ಒಂದೇ ನಾಣ್ಯದ 2 ಮುಖಗಳಿದ್ದಂತೆ, ಜಾತ್ಯತೀತ ತತ್ವ ಹೊಂದಿರುವ ಪಕ್ಷಗಳೆಂದರೆ ಅವು ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ಎಂದು ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಕೆ. ಬಸವಂತಪ್ಪ ಹೇಳಿದರು.

ನಗರದ ಅಶೋಕ ರಸ್ತೆಯ ಲ್ಲಿನ ಕಮ್ಯೂನಿಸ್ಟ್‌ ಪಕ್ಷದ ಕಚೇರಿ ಯಲ್ಲಿ ನಡೆದ ಅನೌಪಚಾರಿಕ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಬಡ ಕುಟುಂಬದಿಂದ ಹೋರಾಟ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಈ ಹಂತಕ್ಕೆ ಅಂದರೆ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿದರೆ ಉತ್ತಮ ಸ್ಥಾನ ದೊರೆಯುವುದು ಶತಸಿದ್ದ. ಕ್ಷೇತ್ರದ ಜನತೆ ನನ್ನ ಕೈ ಹಿಡಿದಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಭಾರತೀಯ ಕಮ್ಯೂನಿಸ್ಟ್‌ ಪಾರ್ಟಿ ಹಾಗೂ ನಮ್ಮ ಸಂಬಂಧ ಅವಿನಾಭಾವ, ಪಂಪಾಪತಿ ಅವರ ಕಾಲದಿಂ ದಲೂ ನಾನು ಸಿಪಿಐ ಪಕ್ಷದ ಒಡನಾಟದಲ್ಲಿ ಇದ್ದೇನೆ. ಕಮ್ಯೂನಿಸ್ಟ್‌ ಪಾರ್ಟಿ ಎಂದು ಒಂದು ಕಾಲದಲ್ಲಿ ಶಿಸ್ತುಬದ್ದ ಪಕ್ಷ ಎನ್ನುವಂತೆ ಇತ್ತು. ಯಾರಿಗೆ ಶಕ್ತಿ ಇಲ್ಲವೋ, ಯಾರಿಗೆ ಧ್ವನಿ ಇದ್ದಿಲ್ಲವೋ ಅವರಿಗೆ ಶಕ್ತಿ, ಧ್ವನಿ ನೀಡುವಂತ ಪಕ್ಷವಾಗಿತ್ತು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಕಷ್ಟಗಳನ್ನು ಬಗೆಹರಿಸಿದ ಪಕ್ಷ ಕಮ್ಯೂನಿಸ್ಟ್‌ ಪಕ್ಷ ಎಂದು ಹೇಳಿದರು.

ಕಟ್ಟಡ ಕಾರ್ಮಿಕರ ರಾಜಾಧ್ಯಕ್ಷ ಆವರಗೆರೆ ಹೆಚ್.ಜಿ. ಉಮೇಶ್ ಮಾತನಾಡಿ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಂದ ಪಡೆಯಲಾಗಿರುವ 4500 ಕೋಟಿ ಹಣ ಇದೆ. ಅಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಕಾರ್ಮಿಕ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಕೃಷಿ, ಹಮಾಲರು ಸೇರಿದಂತೆ, ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರ ಸೌಲಭ್ಯಕ್ಕಾಗಿ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಿಪಿಐ ಖಜಾಂಚಿ ಆನಂದರಾಜ್ ಮಾತನಾಡಿ, ಯಾವುದೇ ಚುನಾವಣೆಯಾಗಲೀ ಕಾಂಗ್ರೆಸ್ ಪಕ್ಷಕ್ಕೆ ಕಮ್ಯೂನಿಸ್ಟ್‌ ಬೆಂಬಲ ನೀಡುತ್ತದೆ. ಕಮ್ಯೂನಿಸ್ಟ್‌ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆ. ಬಿಜೆಪಿ ಪಕ್ಷದೊಂದಿಗೆ ನಮ್ಮ ತತ್ವ, ಸಿದ್ದಾಂತಗಳು ಹೊಂದಾಣಿಕೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಆಗುತ್ತವೆ. ಆದಕಾರಣ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಆವರಗೆರೆ ಚಂದ್ರು, ಆವರಗೆರೆ ವಾಸು, ಶಾರದಮ್ಮ, ಸರೋಜ ಹಾಗೂ ಇತರರು ಇದ್ದರು.

error: Content is protected !!