ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು
ಜಗಳೂರು, ಜು.26- ಮದ್ಯವ್ಯಸನ ಮುಕ್ತರಾದರೆ ಕೌಟುಂಬಿಕ ಕಲಹಗಳು ದೂರವಾಗುತ್ತವೆ, ಸಮಾಜದಲ್ಲಿ ಗೌರವ, ಮನ್ನಣೆ ದೊರೆಯುತ್ತದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮದ್ಯವರ್ಜನೆ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮದ್ಯವರ್ಜನೆ ಶಿಬಿರದ ಸದುಪಯೋಗ ಪಡೆದುಕೊಂಡು ಶಿಬಿರಾರ್ಥಿಗಳು ಜಾಗೃತರಾಗಿ ದುಶ್ಚಟಗಳಿಂದ ದೂರವಾಗಬೇಕು. ಕುಟುಂಬದ ಸದಸ್ಯರೊಂದಿಗೆ ಸುಖ ಸಂಸಾರ ನಡೆಸಬೇಕು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಹಣ ಸಂಗ್ರಹಿಸಿದರೆ ಆರ್ಥಿಕ ಸಂಕಷ್ಟದಿಂದ ಹೊರಬಂದು ಮಕ್ಕಳ ವಿದ್ಯಾಭ್ಯಾಸದ ವ್ಯಯ ಭರಿಸಿ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಸಲಹೆ ನೀಡಿದರು.
ದುಶ್ಚಟಗಳಿಗೆ ದಾಸರಾಗಬಾರದು. ದುಡಿಮೆ ಹಣವನ್ನು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಜೀವನ ಸಾಗಿಸಬೇಕು. ಸೇವಾ ಮನೋಭಾವ ಮೈಗೂಡಿಸಿಕೊಂಡರೆ ಸಾರ್ಥಕತೆಯ ಜೀವನ ಸಾಧ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಆರ್ಥಿಕ ಸಾಲ-ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಮದ್ಯವರ್ಜನೆ ಶಿಬಿರಗಳಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಶ್ಲ್ಯಾಘನೀಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಜಿಲ್ಲಾ ಯೋಜನಾಧಿಕಾರಿ ಜನಾರ್ಧನ್, ತಾಲ್ಲೂಕು ಯೋಜನಾಧಿಕಾರಿ ಗಣೇಶ್, ಶಿಬಿರದ ಅಧ್ಯಕ್ಷ ಜಿ.ಎಸ್. ಚಿದಾನಂದ, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ಶಿಬಿರದ ಸಮಿತಿ ಸದಸ್ಯರಾದ ಬಿ.ಲೋಕೇಶ್, ಓ.ಮಂಜಣ್ಣ, ಇಕ್ಬಾಲ್, ಅಹ ಮ್ಮದ್, ರೇವಣ್ಣ, ಹೊನ್ನೂರು ಸ್ವಾಮಿ, ಇದ್ದರು