ರಕ್ಷಣಾ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಕ್ಯಾಪ್ಟನ್ ನವೀನ್ ನಾಗಪ್ಪ ಅಣಬೇರು
ದಾವಣಗೆರೆ, ಜು. 26 – ಕಂಠಪಾಠ ಮಾಡಿದ ಪಾಠಗಳಿಂದ ಸೈನಿಕ ಅಧಿಕಾರಿಗಳಾ ಗಲು ಸಾಧ್ಯವಿಲ್ಲ. ಸೈನಿಕ ಅಧಿಕಾರಿಗಳಾಗಲು ಬಯಸುವವರಿಗೆ ನಾಯಕತ್ವದ ಗುಣ ಹಾಗೂ ಕ್ಷಣಾರ್ಧದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಬೇಕು ಎಂದು ರಕ್ಷಣಾ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಕ್ಯಾಪ್ಟನ್ ನವೀನ್ ನಾಗಪ್ಪ ಅಣಬೇರು ಹೇಳಿದರು.
ನಗರದ ಬಿ.ಐ.ಇ.ಟಿ.ಯಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸೈನ್ಯದ ಅಧಿಕಾರಿಯಾಗಿ ಆಯ್ಕೆಯಾಗಲು `ಸೇವೆಗಳ ಆಯ್ಕೆ ಮಂಡಳಿ’ (ಎಸ್.ಎಸ್.ಬಿ.) ಪರೀಕ್ಷೆ ನಡೆಸಲಾಗುತ್ತದೆ. ತಮಾಷೆಯಾಗಿ ಇದನ್ನು `ಸೇವೆಗಳ ತಿರಸ್ಕಾರ ಮಂಡಳಿ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಅರ್ಜಿ ಹಾಕುವ ಸಾಕಷ್ಟು ಜನರು ತಿರಸ್ಕೃತರಾಗುತ್ತಾರೆ ಎಂದು ನವೀನ್ ನಾಗಪ್ಪ ತಿಳಿಸಿದರು.
ಸೈನಿಕ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ನಾಯಕತ್ವ ಗುಣ ಹಾಗೂ ಕ್ಷಣಾರ್ಧ ದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರಿಗಣಿಸಲಾಗು ತ್ತದೆ. ಏಕೆಂದರೆ, ಯುದ್ಧ ಭೂಮಿಯಲ್ಲಿ ಗುಂಡು – ಬಾಂಬುಗಳು ಸಿಡಿಯುವಾಗ ಗಿಳಿಪಾಠಗಳು ಉಪ ಯೋಗಕ್ಕೆ ಬರುವುದಿಲ್ಲ ಎಂದವರು ಹೇಳಿದರು.
ತ್ಯಾಗ-ಬಲಿದಾನಗಳಿಗೆ ನಾವು ಅರ್ಹರೇ?
ಕಾರ್ಗಿಲ್ ಯುದ್ಧದ ವೇಳೆ 526 ಸೈನಿಕರು ಹುತಾತ್ಮರಾದರು. 1,300 ಸೈನಿಕರು ತೀವ್ರವಾಗಿ ಗಾಯಗೊಂಡು ಅಂಗಹೀನರಾದ ರು. ಅವರ ಈ ತ್ಯಾಗ ಬಲಿದಾನಗಳಿಗೆ ನಾವು ಅರ್ಹರೇ?
ಈ ಪ್ರಶ್ನೆ ನನಗೆ ಆಗಾಗ ಕಾಡುತ್ತಿರುತ್ತದೆ. ನೀವೂ ಈ ಪ್ರಶ್ನೆ ಕೇಳಿಕೊಳ್ಳಿ, ನಿಮ್ಮ ಉತ್ತರವೇ ನನ್ನದೂ ಆಗಿದೆ ಎಂದು ರಕ್ಷಣಾ ಸಚಿ ವಾಲಯದ ಅಧೀಕ್ಷಕ ಇಂಜಿನಿಯರ್ ಕ್ಯಾಪ್ಟನ್ ನವೀನ್ ನಾಗಪ್ಪ ಅಣ ಬೇರು ಮಾರ್ಮಿಕವಾಗಿ ತಿಳಿಸಿದರು.
ಸೈನಿಕ ಅಧಿಕಾರಿಯಾದ ಕೆಲವೇ ತಿಂಗಳಲ್ಲಿ ಕಾರ್ಗಿಲ್ ಯುದ್ಧ ಎದು ರಾದ ಸಂದರ್ಭ ಹಾಗೂ ಅದರಲ್ಲಿ ನಡೆದ ಹೋರಾಟದ ಬಗ್ಗೆ ನವೀನ್ ನಾಗಪ್ಪ ವಿವರವಾಗಿ ತಿಳಿಸಿದರು.
ಸೈನಿಕ ಅಧಿಕಾರಿಗಳಿಗಾಗಿ ಬಡ್ಡಿ (ಸಹಾಯಕ) ಎಂಬ ವ್ಯವಸ್ಥೆ ಇದೆ. ಸೈನಿಕ ಅಧಿಕಾರಿಗಳಿಗೆ ನೆರವಾಗಲು ಒಬ್ಬರನ್ನು ನೇಮಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕ ಶಾಮ್ ಸಿಂಗ್ ನನಗೆ ಬಡ್ಡಿ ಆಗಿದ್ದರು. ಪಾಯಿಂಟ್ 4875 ಬೆಟ್ಟವನ್ನು ಪಾಕ್ ಸೈನ್ಯ ಅತಿಕ್ರಮಿಸಿಕೊಂಡಿತ್ತು. ಬೆಟ್ಟ ಮರು ವಶಪಡಿಸಿಕೊಳ್ಳುವ ಹೋರಾಟದಲ್ಲಿ ಅನಾರೋಗ್ಯದ ನಡುವೆಯೂ ಶಾಮ್ ಸಿಂಗ್ ಹಠಕ್ಕೆ ಬಿದ್ದು ನನಗೆ ಜೊತೆಯಾಗಿದ್ದರು.
ಇದೇ ಹೋರಾಟದಲ್ಲಿ ಸೈನಿಕ ಅಧಿಕಾರಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಭಾಗಿಯಾಗಿದ್ದರು. ಮೊದಲ ದಿನದ ಹೋರಾಟದಲ್ಲಿ ಶಾಮ್ ಸಿಂಗ್ ಹುತಾತ್ಮರಾದರು.
ಹೋರಾಟದ ನಾಲ್ಕನೇ ದಿನ ನಾನು ಗ್ರೆನೇಡ್ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡೆ. ಬಾತ್ರಾ ಅವರು ನನ್ನ ರಕ್ಷಣೆಗೆ ನೆರವಾಗಿ ಹೋರಾಟ ಮುಂದುವರೆಸಿದರು. ಕ್ಯಾಪ್ಟನ್ ಬಾತ್ರ ನೇತೃತ್ವದಲ್ಲಿ ಈ ಬೆಟ್ಟವನ್ನು ವಶಪಡಿಸಿಕೊಳ್ಳಲಾಯಿ ತು. ಆದರೆ, ಬಾತ್ರಾ ಹುತಾತ್ಮ ರಾದರು. ಮರಣೋತ್ತರವಾಗಿ ಅವರಿಗೆ ಪರಮವೀರ ಚಕ್ರ ಪ್ರಶಸ್ತಿ ದೊರೆಯಿತು. ಅವರ ಜೀವನವನ್ನು ಆಧರಿಸಿ `ಶೇರ್ ಶಾ’ ಎಂಬ ಚಿತ್ರ ನಿರ್ಮಿಸಲಾಗಿದೆ ಎಂದು ನವೀನ್ ನಾಗಪ್ಪ ಹೇಳಿದರು.
ಸೈನ್ಯದ ಅಧಿಕಾರಿ ನೇಮಕದ ಸಂದರ್ಭದಲ್ಲಿ ಮನೋವೈದ್ಯರೂ ಇರುತ್ತಾರೆ. ಇವರು ಅಭ್ಯರ್ಥಿಗಳು ಕ್ಷಣಮಾತ್ರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆಯೇ ಹೊರತು, ಟ್ರೈನಿಂಗ್ ಸಂಸ್ಥೆಗಳಲ್ಲಿ ಕಲಿತು ಬಂದು ನೀಡುವ ಉತ್ತರಗಳಿಗೆ ಮಣೆ ಹಾಕುವುದಿಲ್ಲ ಎಂದರು.
24 ವರ್ಷಗಳ ಹಿಂದೆ ಸಣ್ಣ ವಯಸ್ಸಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ತಮ್ಮ ಅನುಭವ ಹಂಚಿಕೊಂಡ ಅವರು, ಯುದ್ಧದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡು ಎಂಟು ಶಸ್ತ್ರಚಿಕಿತ್ಸೆಗೆ ಒಳಗಾಗಿ 21 ತಿಂಗಳ ಕಾಲ ಆಸ್ಪತ್ರೆಯಲ್ಲಿರಬೇಕಾಯಿತು ಎಂದರು.
ನನ್ನ ತಂಡದ ಸಾಹಸದಿಂದ ಕಾರ್ಗಿಲ್ನ ಪಾಯಿಂಟ್ 4875 ಬೆಟ್ಟದ ಮೇಲೆ ತ್ರಿವರ್ಣ ಧ್ವಜ ಹಾರುವಂತಾಯಿತು. ಆ ಸಾಹಸಗಾಥೆ ಜೀವನದಲ್ಲಿ ಸಾರ್ಥಕ ಭಾವ ತರುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಭಾರತ ದೇಶ ಮುಂದುವರೆಯುವುದನ್ನು ಸಹಿಸದವರು ದೇಶ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಪ್ರಯತ್ನಗಳ ಬಗ್ಗೆ ಸತರ್ಕವಾಗಿರಬೇಕು ಎಂದು ಹೇಳಿದರು.
ವೇದಿಕೆಯ ಮೇಲೆ ಕಾಲೇಜಿನ ಪ್ರಾಂಶು ಪಾಲ ಹೆಚ್.ಬಿ. ಅರವಿಂದ, ಉಪನ್ಯಾಸಕರಾದ ಕೆ.ಎಸ್. ಬಸವರಾಜಪ್ಪ, ಶಂಕರಮೂರ್ತಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಅಂಕಿತ ಪ್ರಾರ್ಥಿಸಿದರು. ಸ್ಫೂರ್ತಿ ಸ್ವಾಗತಿಸಿದರೆ, ಮಧು ದೇಶಭಕ್ತಿ ಗೀತೆ ಹಾಡಿದರು.