ನವಣೆ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆ

ನವಣೆ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆ

ದಾವಣಗೆರೆ, ಜು. 23 – ನವಣೆ ಅಧಿಕ ಇಳುವರಿ ಕೊಡುವ ತಳಿಯಾದ DHFt 109-3 ಬೆಳೆಯಿರಿ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಓ. ಅಭಿಪ್ರಾಯಪಟ್ಟರು.

ಜಗಳೂರು ತಾಲ್ಲೂಕಿನ ಕಲ್ಲೇ ದೇವರಪುರ ಗ್ರಾಮದಲ್ಲಿ ಐಸಿಎಆರ್ ತರಳಬಾಳು  ಕೃಷಿ ವಿಜ್ಞಾನ ಕೇಂದ್ರ (ದಾವಣಗೆರೆ) ಇವರು ನವಣೆ ಬೆಳೆಯ ಸಮಗ್ರ ಬೆಳೆ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ ಅಂಗವಾಗಿ ಹೊರ ಆವರಣ ತರಬೇತಿಯನ್ನು ಆಯೋಜಿಸಲಾಗಿತ್ತು. ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಮಾತನಾಡುತ್ತಾ ಮಳೆ ತಡವಾಗಿರುವುದರಿಂದ  ಸಿರಿ ಧಾನ್ಯಗಳನ್ನು  ಬೆಳೆಯುವುದು ಸೂಕ್ತ. ನವಣೆ ಬೆಳೆಯ  ಬಿತ್ತನೆ ಬೀಜವನ್ನು ಎಕರೆಗೆ 4 ಕೆಜಿಯಂತೆ ಸಂಯುಕ್ತ ಕೂರಿಗೆ ಸಹಾಯದಿಂದ ಬಿತ್ತನೆ ಮಾಡಬೇಕು. ಜೈವಿಕ  ಗೊಬ್ಬರಗಳಾದ ಅಜಟೋಬ್ಯಾಕ್ಟರ್ ಹಾಗೂ ರಂಜಕ ಕರಗಿಸುವ ಗೊಬ್ಬರವನ್ನು ಬೀಜೋಪಚಾರಕ್ಕೆ ಎಕರೆಗೆ 500 ಗ್ರಾಂ ನಂತೆ ಬಳಸಬೇಕು. ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶಿಫಾರಸ್ಸು ಮಾಡಿದ ರಸ ಗೊಬ್ಬರವನ್ನು ಸುಮಾರು 30 ರಷ್ಟುನ್ನು ಉಳಿಸಬಹುದು. 

ಡಾ. ಟಿ.ಜಿ. ಅವಿನಾಶ್ ಸಸ್ಯ ಸಂರಕ್ಷಣೆ ತಜ್ಞರು ಇವರು ಸಿರಿ ಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿನ ಆರೋಗ್ಯ ಹೆಚ್ಚುವುದರ ಜೊತೆಗೆ ಮನುಷ್ಯನ ಆರೋಗ್ಯವು ಹೆಚ್ಚುತ್ತದೆ ಎಂದರು. ಆಯ್ದ ರೈತರಿಗೆ ಒಳ ಸುರಿವುಗಳಾದ ಬಿತ್ತನೆ ಬೀಜ ಹಾಗೂ ಜೈವಿಕ ಗೊಬ್ಬರಗಳನ್ನು ಪ್ರಾತ್ಯಕ್ಷಿಕೆ ಅಂಗವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

error: Content is protected !!